April 20, 2025
1330807-captain-ministry-of-defence-shri-rajesh-1

ನವದೆಹಲಿ: ಮಂಗಳೂರಿನಲ್ಲಿ ದೇಶದ ಮೊದಲ ಕೋಸ್ಟ್‌ಗಾರ್ಡ್‌ ಅಕಾಡೆಮಿ ಸ್ಥಾಪನೆಗೆ ಸಂಬಂಧಿಸಿದ ಬಾಕಿ ಒಪ್ಪಿಗೆ ಪ್ರಕ್ರಿಯೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವುದಕ್ಕೆ ಹೆಚ್ಚಿನ ಮುತುವರ್ಜಿ ವಹಿಸುವಂತೆ ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಇಂದು ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ರಾಜೇಶ್‌ ಕುಮಾರ್‌ ಸಿಂಗ್‌ ಅವರನ್ನು ಭೇಟಿಯಾಗಿದ್ದಾರೆ.

ನವದೆಹಲಿಯಲ್ಲಿ ಮಂಗಳವಾರ ಸಿಂಗ್‌ ಅವರನ್ನು ಭೇಟಿಯಾದ ಸಂಸದರು, ಕರಾವಳಿ ತೀರದ ಕಣ್ಗಾವಲು, ಭದ್ರತೆ ನೌಕಾ ಪಡೆಗೆ ಪ್ರತ್ಯೇಕ ವಿಶ್ವದರ್ಜೆಯ ತರಬೇತಿಗಾಗಿ 2017ರಲ್ಲಿ ಮಂಗಳೂರಿನಲ್ಲಿ ಕೋಸ್ಟ್‌ಗಾರ್ಡ್‌ ಅಕಾಡೆಮಿ ಸ್ಥಾಪನೆಗೆ ಮಂಜೂರಾತಿ ದೊರೆತಿತ್ತು. ಈ ಅಕಾಡೆಮಿಗಾಗಿ ಕೆಂಜಾರಿನಲ್ಲಿ ಕೆಐಎಡಿಬಿಯಿಂದ ಈಗಾಗಲೇ 159.03 ಎಕರೆ ಜಮೀನು ಮಂಜೂರಾಗಿದ್ದು, ಭೂ ಹಸ್ತಾಂತರ ಪ್ರಕ್ರಿಯೆ ಕೂಡ ನಡೆದಿದೆ. ಅಲ್ಲದೆ ಅಕಾಡೆಮಿ ಸ್ಥಾಪಿಸುವುದಕ್ಕೆ ವಿಸ್ತೃತ ಯೋಜನಾ ವರದಿ ಕೂಡ ರಕ್ಷಣಾ ಸಚಿವಾಲಯಕ್ಕೆ ಸಲ್ಲಿಕೆಯಾಗಿದ್ದು, ಕರ್ನಾಟಕ ಮಾತ್ರವಲ್ಲ ಇಡೀ ದೇಶದ ಪಾಲಿಗೆ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾದ ಕೋಸ್ಟ್‌ಗಾರ್ಡ್‌ ಅಕಾಡೆಮಿ ಸ್ಥಾಪಿಸುವುದಕ್ಕೆ ಬಾಕಿರುವ ಆಡಳಿತಾತ್ಮಕ ಒಪ್ಪಿಗೆಯನ್ನು ತ್ವರಿತಗೊಳಿಸುವುದಕ್ಕೆ ಮುತುವರ್ಜಿ ವಹಿಸಬೇಕೆಂದು ಕ್ಯಾ. ಚೌಟ ಅವರು ರಕ್ಷಣಾ ಕಾರ್ಯದರ್ಶಿಗಳನ್ನು ಕೋರಿದ್ದಾರೆ.

ಮಂಗಳೂರಿನಲ್ಲಿ ಕೋಸ್ಟ್‌ಗಾರ್ಡ್‌ ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ ಬಹುತೇಕ ಆಡಳಿತಾತ್ಮಕ ಮಂಜೂರಾತಿ ಪ್ರಕ್ರಿಯೆಗಳು ಪೂರ್ಣಗೊಂಡಿದೆ. ಸುಮಾರು 1385 ಕೋಟಿ ರೂ.ಗಳ ಈ ಯೋಜನೆಗೆ ಸದ್ಯ ರಕ್ಷಣೆ ಕುರಿತ ಸಂಪುಟ ಸಮಿತಿಯ ಒಪ್ಪಿಗೆಯಷ್ಟೇ ಬಾಕಿಯಿದೆ. ಹೀಗಾಗಿ, ಈ ಸಂಪುಟ ಸಮಿತಿಯಿಂದ ಆದಷ್ಟು ಬೇಗ ಒಪ್ಪಿಗೆ ಪಡೆದು ಕೋಸ್ಟ್‌ಗಾರ್ಡ್‌ ಅಕಾಡೆಮಿ ಸ್ಥಾಪನೆ ಯೋಜನೆಯನ್ನು ಕಾರ್ಯಗತಗೊಳಿಸುವುದಕ್ಕೆ ಎಲ್ಲ ರೀತಿಯ ಸಹಕಾರ ನೀಡುವಂತೆ ಕ್ಯಾ. ಚೌಟ ಅವರು ಇದೇ ಸಂದರ್ಭದಲ್ಲಿ ರಾಜೇಶ್‌ ಕುಮಾರ್‌ ಸಿಂಗ್‌ ಅವರಲ್ಲಿ ಮನವಿ ಮಾಡಿದ್ದಾರೆ.

ಭೇಟಿ ಬಳಿಕ ಪ್ರತಿಕ್ರಿಯಿಸಿರುವ ಕ್ಯಾ. ಚೌಟ, ರಕ್ಷಣಾ ಕಾರ್ಯದರ್ಶಿಗಳು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ವಿಶ್ವದರ್ಜೆಯ ಕೋಸ್ಟ್ ಗಾರ್ಡ್ ಅಕಾಡೆಮಿಯು ಭಾರತದಲ್ಲಿ ಅದರಲ್ಲೂ ನಮ್ಮ ಮಂಗಳೂರಿನಲ್ಲಿ ಸ್ಥಾಪನೆಯಾಗುತ್ತಿರುವುದು ನಮಗೆ ಬಹಳ ಹೆಮ್ಮಯ ಸಂಗತಿ. ನಮ್ಮ ದೇಶದ ಈ ಮೊತ್ತ ಮೊದಲ ಅಕಾಡೆಮಿ ಸ್ಥಾಪನೆಯಾದ ಬಳಿಕ ತಟ ರಕ್ಷಣಾ ಪಡೆಗೆ ಸೇರುವ ದೇಶದೆಲ್ಲೆಡೆಯ ಯುವಜನರಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ.

ಕಡಲ ನಿರ್ವಹಣೆ, ರಕ್ಷಣೆಗೆ ಸಂಬಂಧಿಸಿದ ಕೆಲವೊಂದು ಅತ್ಯಾಧುನಿಕ ತರಬೇತಿಯನ್ನು ವಿದೇಶದಲ್ಲಿ ಪಡೆಯಲಾಗುತ್ತಿದ್ದು, ಮಂಗಳೂರಿನಲ್ಲಿ ಕೋಸ್ಟ್‌ಗಾರ್ಡ್‌ ಅಕಾಡೆಮಿ ಸ್ಥಾಪನೆಯಾದರೆ ಮೆರಟೈಮ್‌ ಕ್ಷೇತ್ರದಲ್ಲಿ ಹೊರದೇಶಗಳ ಅವಲಂಬನೆ ತಪ್ಪಲಿದೆ. ಅಷ್ಟೇಅಲ್ಲದೆ, ಅರಬಿ ಸಮುದ್ರ ಮತ್ತು ಕರಾವಳಿಯ ಭದ್ರತೆಗೂ ಇದು ಪೂರಕ. ನಮ್ಮ ಕರಾವಳಿಯ ಆರ್ಥಿಕ ಅಭಿವೃದ್ಧಿಗೂ ಮಹತ್ವದ ಕೊಡುಗೆ ನೀಡಬಲ್ಲುದು ಎಂದು ಹೇಳಿದ್ದಾರೆ.

About The Author

Leave a Reply

Your email address will not be published. Required fields are marked *

<p>You cannot copy content of this page.</p>