

ಉಡುಪಿಯ ಜಿನಾ ಎಂಬ ಯುವತಿಯನ್ನು ಅಪಹರಿಸಿ ಬಲವಂತವಾಗಿ ಮದುವೆಯಾಗಲು ಯತ್ನಿಸಿರುವ ಮುಹಮ್ಮದ್ ಅಕ್ರಮ್ಗೆ ಪಿಎಫ್ಐ ನಂಟಿದ್ದು, ಈ ಕುರಿತು ಕೇಂದ್ರ ಸರಕಾರ ಎನ್ಐಎ ತನಿಖೆ ನಡೆಸಬೇಕೆಂದು ವಿಶ್ವ ಹಿಂದೂ ಪರಿಷದ್ ಪ್ರಾಂತ ಗೋರಕ್ಷ ಪ್ರಮುಖ್ ಸುನೀಲ್ ಕೆ.ಆರ್ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವತಿಯು 9ನೇ ತರಗತಿಯಲ್ಲಿ ಇದ್ದಾಗಲೇ ಅಕ್ರಮ್ ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿಕೊಂಡು ಲವ್ ಜಿಹಾದ್ ಬಲೆಗೆ ಬೀಳಿಸಿ ಕೊಂಡು, ಆಶ್ಲೀಲ ಪೋಟೊಗಳನ್ನು ಚಿತ್ರಿಸಿ ಬೆದರಿಸಿದ್ದನು. ಆಗ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಇದಾದ ಬಳಿಕ ನಿರಂತರವಾಗಿ ಆಕೆಯನ್ನು ಹಿಂಬಾಲಿಸಿ, ಅಪಹರಿಸಿದ್ದಾನೆ ಎಂದು ದೂರಿದರು.
ಅಕ್ರಮ್ ಡ್ರಗ್ಸ್ ಜಾಲದಲ್ಲಿ ಸಕ್ರಿಯವಾಗಿರುವ ಗರುಡ ಗ್ಯಾಂಗಿನ ಸದಸ್ಯ ಎಂದು ಸಂತ್ರಸ್ತೆಯ ಪೋಷಕರು ಹೇಳಿದ್ದಾರೆ. ಪೋಲಿಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಯುವತಿಯನ್ನು ಪೋಷಕರಿಗೆ ಒಪ್ಪಿಸಿ ನ್ಯಾಯ ದೊರಕಿಸಿ ಕೊಡಬೇಕು. ಈ ಸಂಬಂಧ ರಾಜ್ಯ ಗೃಹ ಸಚಿವರು ಹಾಗು ಕೇಂದ್ರ ಗೃಹ ಸಚಿವರಿಗೆ ಮನವಿಯನ್ನು ನೀಡಿ ಎನ್ಐಎಗೆ ಪ್ರಕರಣವನ್ನು ನೀಡುವಂತೆ ಆಗ್ರಹಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ವಿಹಿಂಪ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ವಿಭಾಗ ಪ್ರಚಾರ ಪ್ರಮುಖ್ ಪ್ರದೀಪ್, ಜಿಲ್ಲಾ ಸಂಯೋಜಕ್ ಮನೋಜ್ ಮಲ್ಪೆಹಾಜರಿದ್ದರು.