![](https://thrishulnews.com/wp-content/uploads/2024/03/WhatsApp-Image-2024-03-12-at-11.54.26-AM.jpeg)
ಮಣಿಪಾಲ: ಮುಂಬೈಯಿಂದ ಉಡುಪಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಬ್ಯಾಗ್ ನಲ್ಲಿದ್ದ 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಡೈಮಂಡ್ ಆಭರಣಗಳನ್ನು ಕಳ್ಳರು ಕಳ್ಳತನ ಮಾಡಿರುವ ಘಟನೆ ಸಂಭವಿಸಿದೆ.ದೀಪಾ ರೈ (44) ಚಿನ್ನಾಭರಣ ಕಳೆದುಕೊಂಡ ಮಹಿಳೆ.
ಮಹಾರಾಷ್ಟ್ರ ಮುಲುಂದು ವೈಶಾಲಿ ನಗರದ ದೀಪಾ ರೈ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತಮ್ಮ ಮನೆಯಾದ ಕಟಪಾಡಿಗೆ ಡಿ.5ರಂದು ಅಕ್ಕ, ಭಾವ, ಅಮ್ಮ ಹಾಗೂ ತಂದೆಯೊಂದಿಗೆ ಮುಂಬೈಯ ಪನ್ ವೇಲಿನಿಂದ ಮತ್ಸ್ಯ ಗಂಧ ರೈಲಿನಲ್ಲಿ ಹೊರಟಿದ್ದರು.ತಮ್ಮ ಚಿನ್ನಾಭರಣಗಳನ್ನು 3 ಬ್ಯಾಗ್ ಗಳಲ್ಲಿ ಇರಿಸಿ, ಸೀರೆಯ ಮಧ್ಯ ಭಾಗದಲ್ಲಿ ಇಟ್ಟುಕೊಂಡಿದ್ದರು. ಡಿ.6ರಂದು ಮುಂಜಾನೆ 5 ಗಂಟೆಗೆ ರೈಲು ಕುಂದಾಪುರ ಸ್ಟೇಷನ್ ತಲುಪಿದ್ದು, ಉಡುಪಿಯಲ್ಲಿ ಇಳಿಯುವುದಕ್ಕೆ ಇವರು ಬ್ಯಾಗ್ ಗಳನ್ನು ರೈಲಿನ ಬಾಗಿಲಿನ ಬಳಿ ತಂದು ಇರಿಸಿದ್ದರು.
ರೈಲು ಮುಂಜಾನೆ 5.40 ಗಂಟೆಗೆ ಉಡುಪಿಯ ರೈಲ್ವೆ ಸ್ಟೇಷನ್ ಗೆ ಬಂದಿದ್ದು, ಬಳಿಕ ರೈಲಿನಿಂದ ಇಳಿದು ಕಟಪಾಡಿಯ ಮನೆಗೆ ಹೋಗಿ ಬ್ಯಾಗ್ ಪರಿಶೀಲಿಸಿದಾಗ 3 ಬ್ಯಾಗ್ ನಲ್ಲಿಟ್ಟಿರುವ ಚಿನ್ನಾಭರಣಗಳು ಮತ್ತು ಡೈಮಂಡ್ ಆಭರಣಗಳು ಕಳವಾಗಿರುವುದು ಕಂಡು ಬಂದಿದೆ. ಕಳವಾಗಿರುವ ಚಿನ್ನಾಭರಣಗಳ ಅಂದಾಜು ತೂಕ 850 ಗ್ರಾಂ ಆಗಿದ್ದು, ಒಟ್ಟು ಮೌಲ್ಯ 34 ಲಕ್ಷ ರೂ. ಆಗಬಹುದು ಹಾಗೂ ಕಳವಾದ ಡೈಮಂಡ್ ನ ಮೌಲ್ಯ 6 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಇವುಗಳ ಒಟ್ಟು ಮೌಲ್ಯ ಸುಮಾರು 40 ಲಕ್ಷ ರೂ. ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.