

ಕಾರವಾರ : ಬ್ರಹ್ಮಾವರದಲ್ಲಿ ಸರಗಳ್ಳತನ ಮಾಡಿ ಕಾರ್ ನಲ್ಲಿ ಪರಾರಿಯಾಗಿದ್ದ ಮೂವರು ದರೋಡೆಕೋರರನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.
ಮೊಹಿದ್ದೀನ್ ,ಸುಜೀತ್ , ಗೌರೀಶ್ ಎಂಬ ಮೂವರು ದರೋಡೆಕೋರರನ್ನು ರವಿವಾರ ಯಲ್ಲಾಪುರ ತಾಲೂಕಿನ ಅನಗೂಡ ಹುಟುಕನಮನೆ ಕಾಡಲ್ಲಿ , ಗ್ರಾಮಸ್ಥರ ನೆರವಿನಿಂದ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಬೆಳಗಿನ ಜಾವ ಉಡುಪಿ ಬ್ರಹ್ಮಾವರ ಠಾಣೆಯ ವ್ಯಾಪ್ತಿಯಲ್ಲಿ ಮನೆಯ ಹೊರಗೆ ನಿಂತಿದ್ದ ಮಹಿಳೆಯ ಬಂಗಾರದ ಸರ ಕಿತ್ತು ಹುಂಡೈ ವೆನು ಕಾರಲ್ಲಿ ಪರಾರಿಯಾಗಿದ್ದರು . ತಕ್ಷಣ ಉಡುಪಿ ಪೊಲೀಸರು , ಜಿಲ್ಲೆಯ ಪೊಲೀಸರು ಹಾಗೂ ಚೆಕ್ ಪೋಸ್ಟ್ ಗೆ ಮಾಹಿತಿ ನೀಡಲಾಯಿತು. ಹೊನ್ನಾವರ ಚೆಕ್ ಪೋಸ್ಟ್ ನಲ್ಲಿ ದರೋಡೆಕೋರರ ಕಾರ್ ದಾಟಿದ್ದು ಸಿಸಿ ಟಿವಿಯಲ್ಲಿ ಕಾಣಿಸಿತು.
ತಕ್ಷಣ ಯಲ್ಲಾಪುರ , ಅಂಕೋಲಾ ಪೊಲೀಸರಿಗೆ ಮಾಹಿತಿ ನೀಡಲಾಯಿತು. ದರೋಡೆ ಕೋರರ ಕಾರ್ ಯಲ್ಲಾಪುರ ದಾಟುವಾಗ , ಯಲ್ಲಾಪುರ ಪೊಲೀಸರು ಬೆನ್ನಟ್ಟಿದರು . ಪಿಐ ಎಚ್. ರಮೇಶ್ , ಪಿಎಸ್ಐ ಯಲ್ಲಾಲಿಂಗ ಹಾಗೂ ಸಿಬ್ಬಂದಿ ಚುರುಕಾದರು. ಆಗ ದರೋಡೆಕೋರರು ಕಾರ್ ನ್ನು ಅನಗೋಡ ಮಾರ್ಗದತ್ತ ತಿರುಗಿಸಿ, ಹುಟುಕನಮನೆಯ ಕಾಡಲ್ಲಿ ಕಾರ್ ಬಿಟ್ಟು ತಪ್ಪಿಸಿಕೊಳ್ಳಲು ಯತ್ನಿಸಿದರು. ಆರು ತಾಸು ಅರಣ್ಯದಲ್ಲಿ ಕ್ಯೂಬಿಂಗ್ ಮಾಡಿ, ಸಾರ್ವಜನಿಕರ ಸಹಾಯ ಪಡೆದು ಮೂವರು ದರೋಡೆಕೋರರನ್ನು ಬಂಧಿಸಲಾಯಿತು. ಬಂಧಿತರಿಂದ ಬಂಗಾರದ ಸರ ಮರಳಿ ಪಡೆಯಲಾಗಿದೆ. ಪ್ರಕರಣ ದಾಖಲು ಪ್ರಕ್ರಿಯೆ ನಡೆದಿದೆ. ಯಲ್ಲಾಪುರ ಪೊಲೀಸರ ಕಾರ್ಯಾಚರಣೆ ಸಾರ್ವಜನಿಕರ ಮತ್ತು ಪೊಲೀಸ್ ಇಲಾಖೆಯ ಮೆಚ್ಚುಗೆಗೆ ಕಾರಣವಾಗಿದೆ.