
ಮೂಡುಬಿದಿರೆ:ತಾಕೋಡೆ ಬರ್ಕೆ ಧರ್ಮನೇಮಕ್ಕೆ ಬಾವದಗುತ್ತುವಿನಿಂದ ಭಂಡಾರವನ್ನು ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆ ಸಾಗಿಸುತ್ತಿದ್ದ ವೇಳೆ ಕಾಲು ಸಂಕ ಮುರಿದು ಬಿದ್ದು ಎಂಟು ಮಂದಿ ಗಾಯಗೊಂಡ ಘಟನೆ ಬುಧವಾರ ನಡೆದಿದೆ.
ಬಾವದಗುತ್ತುವಿನಿಂದ ದೈವದ ಭಂಡಾರವನ್ನು ಪಲ್ಲಕ್ಕಿಯಲ್ಲಿ ಹೊತ್ತು ಸಾಗುವ ಸಾಂಪ್ರದಾಯಿಕ ಮೆರವಣಿಗೆ ನಡೆಯುತ್ತಿತ್ತು. ಕೊಂಬು, ಬ್ಯಾಂಡ್ ಸೇರಿದಂತೆ ವಾದ್ಯಗೋಷ್ಠಿಗಳ ಮುಖೇನ ಭಂಡಾರವನ್ನು ತಾಕೋಡೆ ಬರ್ಕೆ ಧರ್ಮನೇಮಕ್ಕೆ ಕೊಂಡೊಯ್ಯಲಾಗುತ್ತಿತ್ತು. ಬಾವದಬೈಲು ಎಂಬಲ್ಲಿನ ಕಾಲು ಸಂಕವನ್ನು (ಬೀಮ್) ಮೆರವಣಿಗೆ ದಾಟುತ್ತಿದ್ದ ಸಂದರ್ಭದಲ್ಲಿ, ಭಾರ ತಾಳಲಾರದೆ ಸಂಕವು ಏಕಾಏಕಿ ಮುರಿದು ಬಿದ್ದಿದೆ. ಸಂಕ ಮುರಿದ ರಭಸಕ್ಕೆ ಪಲ್ಲಕ್ಕಿ ಸಂಪೂರ್ಣವಾಗಿ ಉರುಳಿ ಬಿದ್ದಿದೆ. ಈ ವೇಳೆ ಪಲ್ಲಕ್ಕಿಯಲ್ಲಿದ್ದ ಪವಿತ್ರ ಮೊಗಮೂರ್ತಿಗಳು ಹಾಗೂ ಧಾರ್ಮಿಕ ಪರಿಕರಗಳು ಕೆಳಕ್ಕೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಪಲ್ಲಕ್ಕಿ ಹೊತ್ತವರು ಅದರ ಅಡಿಯಲ್ಲೇ ಸಿಲುಕಿಕೊಂಡಿದ್ದಾರೆ. ಘಟನೆಯಲ್ಲಿ ಒಟ್ಟು ಎಂಟು ಮಂದಿಗೆ ಗಾಯಗಳಾಗಿವೆ.
ಘಟನೆ ತಿಳಿದ ಕೂಡಲೇ ಸ್ಥಳೀಯರು ತಕ್ಷಣ ಧಾವಿಸಿ ಗಾಯಾಳುಗಳನ್ನು ರಕ್ಷಿಸಿ, ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಾಯ ಮಾಡಿದ್ದಾರೆ. ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
