April 19, 2026
WhatsApp Image 2024-09-06 at 2.14.31 PM
ಸುರತ್ಕಲ್‌: ಖಾಸಗಿ ಸೊಸೈಟಿಯೊಂದರ ಸುರತ್ಕಲ್‌ ಶಾಖೆಯಲ್ಲಿ ಅಲ್ಲಿನ ಅಧಿಕಾರಿಗಳು, ಸಿಬಂದಿ ಶಾಮೀಲಾಗಿ ನಕಲಿ ಲೆಕ್ಕ ತೋರಿಸಿ 2.10 ಕೋಟಿ ರೂ. ಚಿನ್ನಾಭರಣ ಸಾಲ ಹಾಗೂ ಠೇವಣಿ ಲೆಕ್ಕದಲ್ಲಿ ಗೋಲ್‌ಮಾಲ್‌ ನಡೆಸಿ ಅಂದಾಜು 3 ಕೋಟಿಯಷ್ಟು ಹಣ ದುರುಪಯೋಗ ಮಾಡಿಕೊಂಡಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಸೊಸೈಟಿಯ ಅಧ್ಯಕ್ಷರು ಹಾಗೂ ನಿರ್ದೇಶಕರಿಗೆ ನಕಲಿ ವ್ಯವಹಾರಗಳ ಕುರಿತು ಗಮನಕ್ಕೆ ಬಂದ ಮೇರೆಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಹಿತ ಸಿಬಂದಿಗಳನ್ನು ವಿಚಾರಣೆಗೆ ಗುರಿಪಡಿಸಲಾಗಿದ್ದು ಹಣವನ್ನು ಮರಳಿ ಸೊಸೈಟಿಗೆ ಹಸ್ತಾಂತರಿಸದ ಕಾರಣ ಇದೀಗ ಪೊಲೀಸ್‌ ದೂರು ನೀಡಲಾಗಿದೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್‌, ಗುಮಾಸ್ತೆ ದೀಕ್ಷಾ ಶೆಟ್ಟಿ, ಶಾಖಾ ವ್ಯವಸ್ಥಾಪಕ ರಕ್ಷಿತ್‌ ಎಂ. ಶೆಟ್ಟಿ ಹಾಗೂ ಕೊಡಿಯಾಲಬೈಲ್‌ ಶಾಖಾ ಗುಮಾಸ್ತೆ ಪ್ರಿಯಾ ವಿರುದ್ಧ ದೂರು ದಾಖಲಾಗಿದೆ. ದೀಕ್ಷಾ ಶೆಟ್ಟಿ ಚಿನ್ನಾಭರಣ ಮೇಲಿನ ಸಾಲ ನೀಡುವಿಕೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸ್ವಂತಕ್ಕೆ ಬಳಸಿಕೊಂಡಿರುವುದು ಆಡಿಟ್‌ ವರದಿಯಲ್ಲಿ ಮೋಸವಾಗಿರುವುದರ ಬಗ್ಗೆ ಉಲ್ಲೇಖಿಸಲಾಗಿದೆ. 2019ರಿಂದ 2023ರ ಮದ್ಯೆ ಒಟ್ಟು 63 ಚಿನ್ನಾಭರಣಗಳ ಸಾಲವನ್ನು ತಾವೇ ಪಡೆದು ಅಕ್ರಮ ತಿಳಿಯದಂತೆ ಶಾಖೆಯ ಕಂಪ್ಯೂಟರ್‌ನಲ್ಲಿ ಎಂಟ್ರಿ ಮಾಡಿದ್ದಲ್ಲದೆ, ಚಿನ್ನಾಭರಣವನ್ನು ಸಹ ಲಾಕರಿನಿಂದ ತೆಗೆದುಕೊಂಡು ಹೋಗಿ ಪದೇಪದೆ ಅಡಮಾನ ಇಡಲಾಗುತ್ತಿತ್ತು. ಒಟ್ಟು 7 ಸಾವಿರ ಗ್ರಾಂ ತೂಕವನ್ನು ತೋರಿಸಿ, 2.10 ಕೋಟಿಗೂ ಹೆಚ್ಚು ಹಣವನ್ನು ದುರುಪಯೋಗ ಮಾಡಿಕೊಂಡಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷರು, ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾದ ಆರೋಪಿ ರಾಜೇಶ್‌ ಸಹಕಾರಿಯಲ್ಲಿದ್ದ ಹಣಕಾಸು, ಇ-ಸ್ಟಾಂಪ್‌ ಗಳಲ್ಲಿ, ವಾಹನ ಸಾಲ, ಬಾಂಡ್‌, ಪಿಗ್ಮಿ ದಾರರ ಹಣದಲ್ಲಿ ಮೋಸ ಸಹಿತ ವಿವಿಧ ಲೆಕ್ಕಪತ್ರದಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಅಂದಾಜು 95 ಲಕ್ಷ ರೂ. ಮಿಕ್ಕಿ ಲೆಕ್ಕದಲ್ಲಿ ಅವ್ಯವಹಾರ ಕಂಡುಬಂದಿದೆ. ಆರೋಪಿಗಳು ಅವ್ಯವಹಾರ ತಿಳಿಯಬಾರದೆಂದು ಸಿಸಿ ಕೆಮರಾದ ಸಂಪರ್ಕ ಕಡಿತಗೊಳಿಸಿರುವುದು ಕೂಡ ಸೊಸೈಟಿಯ ಆಂತರಿಕ ತನಿಖೆಯಲ್ಲಿ ಗೊತ್ತಾಗಿದೆ. ತನಿಖೆ ಮುಂದುವರಿದಿದೆ.

About The Author

Leave a Reply

Your email address will not be published. Required fields are marked *

You cannot copy content of this page.