May 14, 2025
magu

ಬೆಳ್ತಂಗಡಿ : ಬೆಳಾಲು ಗ್ರಾಮದ ಕೊಡೋಳುಕೆರೆ -ಮುಂಡ್ಕೊಟ್ಟು ರಸ್ತೆಯಲ್ಲಿ ಮಾ.22 ರಂದು ಬೆಳಗ್ಗೆ ಒಂದುವರೇ ತಿಂಗಳ ಹೆಣ್ಣು ಮಗುವನ್ನು ಬಿಟ್ಟು ಹೋಗಿರುವ ಪ್ರಕರಣಕ್ಕೆ ರೋಚಕ ತಿರುವು ಲಭಿಸಿದ್ದು, ಮಗು ಬೆಳಾಲು ನಿವಾಸಿಯದ್ದು ಎಂಬುವುದು ಬಹಿರಂಗಗೊಂಡಿದೆ. ಇದೀಗ ಧರ್ಮಸ್ಥಳ ಪೊಲೀಸರು ಮಗುವಿನ ತಂದೆಯನ್ನು ಪತ್ತೆಹಚ್ಚಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳನ್ನು ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಮಾಯ ನಿವಾಸಿ ತಿಮ್ಮಪ್ಪ ಗೌಡರ ಮಗ ಧರ್ಮಸ್ಥಳದಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ ರಂಜಿತ್ ಗೌಡ (27) ಮತ್ತು ಧರ್ಮಸ್ಥಳ ಗ್ರಾಮದ ಕೊಲಂಗಾಜೆಯ ಮಂಗಳೂರಲ್ಲಿ ಕೆಲಸ ಮಾಡುತ್ತಿದ್ದ ಸುಶ್ಮೀತಾ ಎಂದು ಗುರುತಿಸಲಾಗಿದೆ. ಧರ್ಮಸ್ಥಳ ಪೊಲೀಸರು ಮಗುವಿನ ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು ಪುತ್ತೂರು ಆಶ್ರಮದಲ್ಲಿರುವ ಮಗುವನ್ನು ತಂದೆ-ತಾಯಿಗೆ ಕಾನೂನು ಪ್ರಕ್ರಿಯೆ (DNA) ಮುಗಿಸಿದ ಬಳಿಕ ಹಸ್ತಾಂತರಿಸಲಿದ್ದಾರೆ.

ಬೆಳಾಲಿನ ಕಾಡು ಪ್ರದೇಶದಲ್ಲಿ ಪತ್ತೆಯಾದ ಮಗುವನ್ನು ಸಾರ್ವಜನಿಕರು ರಕ್ಷಿಸಿ ಆರೈಕೆ ಮಾಡಿದ್ದರು. ನಂತರ ಧರ್ಮಸ್ಥಳ ಪೊಲೀಸರ ಸಮ್ಮುಖದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು ಪುತ್ತೂರು ಅಶ್ರಮಕ್ಕೆ ಹಸ್ತಾಂತರಿಸಿದ್ದರು.

ಅಪರಿಚಿತ ಹೆಣ್ಣು ಮಗು ಪತ್ತೆಯಾದ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಬೆಳ್ತಂಗಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಅನ್ನಪೂರ್ಣ ಮಾ.22 ರಂದು ದೂರು ನೀಡಿದ್ದು ಅದರಂತೆ BNS 93 (ಮಗುವನ್ನುಅಸುರಕ್ಷಿತ ಸ್ಥಳದಲ್ಲಿ ತ್ಯಜಿಸಿದ ಬಗ್ಗೆ) ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಕಾರ್ಯಾಚರಣೆಗಿಳಿದ ಧರ್ಮಸ್ಥಳ ಸಬ್ ಇನ್ಸೆಕ್ಟರ್ ಸಮರ್ಥ ಆರ್. ಗಾಣಿಗೇರಾ ಮತ್ತು ತಂಡಕ್ಕೆ ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಲಭಿಸಿದ್ದು, ಎ.2 ರಂದು ರಾತ್ರಿ ಮಗುವಿನ ತಂದೆ ಬೆಳಾಲು ನಿವಾಸಿ ರಂಜಿತ್‌ ಗೌಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿಗಳನ್ನು ಪತ್ತೆ ಹಚ್ಚುತ್ತಿದ್ದಂತೆಯೇ ಇದೀಗ ಇಬ್ಬರು ಕೂಡ ಸ್ವಇಚ್ಛೆಯಿಂದ ಒಂದು ವಾರದೊಳಗೆ ಮದುವೆಯಾಗುವುದಾಗಿ ಪೋಲಿಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಮುಂದೆ ಇಬ್ಬರ ಕುಟುಂಬಸ್ಥರು ಒಪ್ಪಿರುವುದಾಗಿ ತಿಳಿದು ಬಂದಿದೆ.

ರಂಜಿತ್‌ ಮತ್ತು ಸುಶ್ಮೀತಾ ಪರಸ್ಪರ ಪ್ರೀತಿಸುತ್ತಿದ್ದು, ಈ ವಿಚಾರ ಎರಡು ಮನೆಯವರಿಗೂ ತಿಳಿದಿರಲಿಲ್ಲ ಎನ್ನಲಾಗಿದೆ. ಈ ಮಧ್ಯೆ ಈಕೆ ಗರ್ಭಿಣಿಯಾಗಿದ್ದ ವಿಚಾರ ಯಾರಿಗೂ ಹೇಳದೆ ಇಬ್ಬರು ಮಾತ್ರ ಜಾಗೃತೆ ವಹಿಸಿದ್ದರು. ಕ್ಲಿನಿಕ್‌ಗೆ ಪ್ರತಿ ತಿಂಗಳು ದಂಪತಿಗಳಾಗಿ ಹೋಗುತ್ತಿದ್ದ ಇವರು, ತಾಯಿ ಕಾರ್ಡ್ ಕೇಳಿದ್ದಕ್ಕೆ ಅದು ಕಾಣೆಯಾಗಿದೆ ಅಂತ ಹೇಳುತ್ತಿದ್ದರು ಎನ್ನಲಾಗಿದೆ.

ಉಜಿರೆಯಲ್ಲಿ ಬಾಡಿಗೆ ಮನೆ ಮಾಡಿ ಆಕೆಯನ್ನು ಬಿಟ್ಟಿದ್ದ ಆತ ವಾರಕ್ಕೆ ಒಮ್ಮೆ ಬಂದು ನೋಡಿ ಹೋಗುತ್ತಿದ್ದು, ನಾರ್ಮಲ್ ಡೆಲಿವರಿ ಆಗಿದ್ದರಿಂದ ಆಸ್ಪತ್ರೆಗೆ ಹೋಗದೆ ಬಾಡಿಗೆ ರೂಂ ನಲ್ಲೇ ಇದ್ದರು ಎಂದು ತಿಳಿದು ಬಂದಿದೆ. ಮದುವೆಯಾಗದ ಕಾರಣ ಕುಟುಂಬದವರಿಗೆ ಹೆದರಿ ಮಗುವನ್ನು ಕಾಡಿಗೆ ಬಿಟ್ಟಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಇದಲ್ಲದೆ ಇಬ್ಬರ ಮನೆಗಳಿಗೂ ಪೊಲೀಸರು ಬರುವವರೆಗೂ ಈ ವಿಚಾರದ ಬಗ್ಗೆ ಯಾವುದೇ ಸುಳಿವು ಲಭಿಸಿಲ್ಲ ಎನ್ನಲಾಗಿದೆ. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಗಳು ತಂದೆ-ತಾಯಿಯ ವಿಚಾರಣೆ ಬಳಿಕ ತಿಳಿದು ಬರಬೇಕಾಗಿದೆ.

About The Author

Leave a Reply

Your email address will not be published. Required fields are marked *

<p>You cannot copy content of this page.</p>