
ತಿರುವಂತಪುರ: ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಲು ಮಹಿಳೆಯರಿಗೆ ಅವಕಾಶ ನೀಡುವುದಿಲ್ಲ ಎಂಬ ಮಹತ್ವದ ತೀರ್ಮಾನವನ್ನು ತಿರುವಾಂಕೂರು ದೇವಸ್ವಂ ಮಂಡಳಿ ತೆಗೆದುಕೊಂಡಿದೆ.
ಋತುಮತಿಯರಾಗುವ ವಯಸ್ಸಿನ ಮಹಿಳೆಯರ ದೇವಾಲಯ ಪ್ರವೇಶ, ಪೂಜೆ ಸಲ್ಲಿಕೆಗೆ ಅವಕಾಶ ಕೊಟ್ಟಿರುವ ಸುಪ್ರೀಂ ಕೋರ್ಟ್ 2018ರ ತೀರ್ಪನ್ನು ವಿರೋಧಿಸಿ ನಿರ್ಣಯ ತೆಗೆದುಕೊಂಡಿದ್ದೇವೆ ಎಂದು ದೇವಸ್ವಂ ಬೋರ್ಡ್ ಅಧ್ಯಕ್ಷ ಕೆ.ಜಯಕುಮಾರ್ ತಿಳಿಸಿದ್ದಾರೆ.
ಟಿಡಿಬಿಯು ಶಬರಿಮಲೆ ಪದ್ಧತಿ, ಸಂಪ್ರದಾಯ ಹಾಗೂ ನಂಬಿಕೆಗಳನ್ನು ಕಾಪಾಡಲು ಒತ್ತು ಕೊಡುತ್ತದೆ. ರಾಜ್ಯ ಸರ್ಕಾರವೂ ಇದನ್ನು ಎತ್ತಿಹಿಡಿಯಬೇಕು. 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ದೇವಾಲಯ ಪ್ರವೇಶಿಸುವುದನ್ನು ನಿಷೇಧಿಸುವ ಕ್ರಮವನ್ನು ಮುಂದುವರಿಸಲು ನಿರ್ಧರಿಸಿದೆ. ಈ ಬಗ್ಗೆ ತಮ್ಮ ನಿಲುವನ್ನು ಸುಪ್ರೀಂ ಕೋರ್ಟ್ಗೂ ಹೇಳುತ್ತೇವೆ ಎಂದು ತಿಳಿಸಿದರು.
2018ರ ಆದೇಶದ ಪುನರ್ಪರಿಶೀಲನೆ ಅರ್ಜಿ ವಿಚಾರಣೆಗಾಗಿ ಮಾರ್ಚ್ 14ರ ಒಳಗೆ ನಿಲುವನ್ನು ಸ್ಪಷ್ಟಪಡಿಸುವಂತೆ ಸುಪ್ರೀಂಕೋರ್ಟ್ ಕಳೆದ ತಿಂಗಳು ಟಿಡಿಬಿಗೆ ಸೂಚಿಸಿತ್ತು.
