ಕಾಪು: ಕಾರು ಢಿಕ್ಕಿ -ಬಸ್‌ ಮಾಲಕ ಸಾವು

ಕಾಪು : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರು ಢಿಕ್ಕಿ ಹೊಡೆದು ಬಸ್‌ ಮಾಲಕ ಮೃತಪಟ್ಟ ಘಟನೆ ಕಾಪುವಿನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.

ಕಾಪು ಮಹಾವೀರ್‌ ಬಸ್‌ನ ಮಾಲಕ, ಜೈನ ಬಸದಿ ಮನೆಯ ಮಹೇಂದ್ರ ಕುಮಾರ್‌ ಇಂದ್ರ (60) ಮೃತ ದುರ್ದೈವಿ. ಕಳೆದ 3-4 ದಶಕಗಳಿಂದ ಮಹಾವೀರ್‌ ಬಸ್‌ನ ಮಾಲಕರಾಗಿದ್ದ ಅವರು ತಾಯಿ, ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

 

ಮಂಗಳವಾರ ರಾತ್ರಿ 7 ಗಂಟೆಯ ವೇಳೆಗೆ ಕಾಪು ಪೆಟ್ರೋಲ್‌ ಬಂಕ್‌ ಬಳಿಯಿಂದ ಮನೆಗೆ ಬರಲೆಂದು ರಸ್ತೆ ಬದಿ ನಿಂತಿದ್ದಾಗ ರಾ. ಹೆ. 66ರಲ್ಲಿ ಉಡುಪಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.

ಮನೆ ಸಮೀಪವೇ ಅಪಘಾತ : ಮಂಗಳವಾರ ರಾತ್ರಿ ಕಾಪು ಜೈನ ಬಸದಿ ಬಳಿಯಲ್ಲೇ ಅಪಘಾತ ಸಂಭವಿಸಿದ್ದು ತನ್ನ ಮನೆ ಬಳಿಯಲ್ಲೇ ಮಹೇಂದ್ರ ಕುಮಾರ್‌ ಅಪಘಾತಕ್ಕೆ ಬಲಿಯಾಗಿರುವುದು ವಿಧಿ ಲೀಲೆಯಾಗಿದೆ.

ಮೃತ ಮಹೇಂದ್ರ ಕುಮಾರ್‌ ಅವರ ಮನೆ ಹೆದ್ದಾರಿ ಪಕ್ಕದಲ್ಲೇ ಇದ್ದು ಯಾವುದೋ ಅಪಘಾತದ ಸದ್ದು ಕೇಳಿ ಅವರ ಸಹೋದರ ಜೀವಂಧರ್‌ ಅವರು ಹೆದ್ದಾರಿ ಬದಿಗೆ ಬಂದು ನೋಡಿದಾಗ ಅವರ ತಮ್ಮನಿಗೆ ಅಪಘಾತವುಂಟಾಗಿರುವುದು ಬೆಳಕಿಗೆ ಬಂದಿತ್ತು. ತಲೆ, ಕಾಲು ಹಾಗೂ ಮೈ ಕೈಗೆ ಗಾಯವಾಗಿದ್ದ ಗಾಯಾಳುವನ್ನು ಕೂಡಲೇ ಉಡುಪಿ ಹೈಟೆಕ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಅಲ್ಲಿಂದ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆ ಮಣಿಪಾಲಕ್ಕೆ ಕರೆದುಕೊಂಡು ಹೋಗಿದ್ದು ಅಲ್ಲಿ ಚಿಕಿತ್ಸೆಯಲ್ಲಿರುವಾಗಲೇ ಮೃತಪಟ್ಟಿರುವುದಾಗಿ ವೈದ್ಯಕೀಯ ಮೂಲಗಳು ತಿಳಿಸಿವೆ.

ಮೃತರ ಸಹೋದರ ಜೀವಂಧರ್‌ ಕುಮಾರ್‌ ಇಂದ್ರ ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಕಾಪು ಪೊಲೀಸರು, ಅಪಘಾತಕ್ಕೆ ಕಾರಣವಾಗಿರುವ ಕಾರು ಮತ್ತು ಚಾಲಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.

Check Also

ಮಣಿಪಾಲ: ಮನೆಯೊಂದರ ಅಂಗಳದಲ್ಲಿ ಚಿರತೆ ಸಂಚಾರ..! ಸ್ಥಳೀಯರಲ್ಲಿ ಆತಂಕ

ಮಣಿಪಾಲ: ಉಡುಪಿ ನಗರದ ಮಣಿಪಾಲದ ಬಳಿಯ ಪೆರಂಪಳ್ಳಿಯ ಮನೆಯೊಂದರ ಅಂಗಳದಲ್ಲಿ ಶುಕ್ರವಾರ ರಾತ್ರಿ ಚಿರತೆ ಸಂಚಾರ ಕಂಡು ಬಂದಿದ್ದು, ಘಟನೆ …

Leave a Reply

Your email address will not be published. Required fields are marked *

You cannot copy content of this page.