

ಕಾಪು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ 121ನೇ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆಗಳು ಪೂರ್ಣಗೊಂಡಿವೆ.
ಉಡುಪಿ ಜಿಲ್ಲಾಧಿಕಾರಿ ಡಾ| ವಿದ್ಯಾ ಕುಮಾರಿ, ಉಡುಪಿ ಎಸ್ಪಿ ಅರುಣ್ ಕೆ., ಜಿ.ಪಂ. ಸಿಇಒ ಪ್ರತೀಕ್ ಬಾಯಲ್ , ಕಾಪು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಜಯ ಮಾಧವ, ಕಾಪು ತಹಶೀಲ್ದಾರ್ ಡಾ| ಪ್ರತಿಭಾ ಆರ್. ನೇತೃತ್ವದಲ್ಲಿ ಮಸ್ಟರಿಂಗ್ ಕೇಂದ್ರ ಕಾಪು ದಂಡತೀರ್ಥ ವಿದ್ಯಾಸಂಸ್ಥೆಯ ಆವರಣದಲ್ಲಿ ಸಿದ್ದತೆಗಳು ನಡೆದವು.
ಕಾಪು ವಿಧಾನ ಸಭಾ ಕ್ಷೇತ್ರದ 209 ಬೂತ್ ಗಳಲ್ಲಿ ಸುಸೂತ್ರವಾಗಿ ಚುನಾವಣಾ ಪ್ರಕ್ರಿಯೆಗಳಿಗಾಗಿ 1715 ಮಂದಿ ಅಧಿಕಾರಿಗಳು ಮತ್ತು ಸಿಬಂದಿಗಳನ್ನು ಕರ್ತವ್ಯ ಕ್ಕೆ ನಿಯೋಜಿಸಲಾಗಿದೆ. ಸಿಬಂದಿಗಳ ಓಡಾಟಕ್ಕೆ 63 ವಾಹನಗಳು ವಾಹನಗಳನ್ನು ಒದಗಿಸಲಾಗಿದೆ.
ಐದು ಸಖಿ ಮತಗಟ್ಟೆಗಳು: ಕೈಪುಂಜಾಲು ಶಾಲೆ, ದಂಡತೀರ್ಥ ಶಾಲೆ, ಕಾಪು ಪಡು ಸರಕಾರಿ ಮಾದರಿ ಶಾಲೆ, ಮಲ್ಲಾರು ಜನರಲ್ ಶಾಲೆ, ಮೂಳೂರು ಸರಕಾರಿ ಶಾಲೆಗಳಲ್ಲಿ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ವಿಶೇಷ ವಿಂಗಡಣೆ: ಕಟಪಾಡಿ ವೆಂಕಟರಮಣ ಸ್ವಾಮಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಚೇತನರ ನಿರ್ವಹಣೆ, ಬೆಳಪು ಸರಕಾರಿ ಪ್ರೌಢಶಾಲಾ ಮತಗಟ್ಟೆಯನ್ನು ಯುವಜನ ನಿರ್ವಹಣೆ, ಪಾದೂರು ಬಾಷೆಲ್ ಮಿಷನ್ ಶಾಲೆ ಮತಗಟ್ಟೆಯನ್ನು ಧ್ಯೇಯ ಆಧಾರಿತ, ಎರ್ಮಾಳು ತೆಂಕ ಸರಕಾರಿ ಮಾದರಿ ಶಾಲೆಯ ಮತಗಟ್ಟೆಯನ್ನು ಸಾಂಪ್ರದಾಯಿಕ ಮತಗಟ್ಟೆಯಾಗಿ ವಿಂಗಡಿಸಲಾಗಿದೆ.
ಪೆರ್ಡೂರು ಬಾಷೆಲ್ ಮಿಷನ್ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ, ಕೈಪುಂಜಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಡುಬಿದ್ರಿ ನಡ್ಸಾಲು ಕಂಚಿನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯನ್ನು ಅತೀಸೂಕ್ಷ್ಮ ಮತಗಟ್ಟೆಯನ್ನಾಗಿ ಘೋಷಿಸಲಾಗಿದೆ.
ಮತದಾನ ಬಹಿಷ್ಕಾರದ ಆತಂಕ ದೂರ: ಬೆಳ್ಳೆ ಕಟ್ಟಿಂಗೇರಿ ವಾರ್ಡ್ ನಲ್ಲಿ ಮೂಲ ಸೌಕರ್ಯಗಳ ಕೊರತೆಗೆ ಆಹ್ರಹಿಸಿ ಮತದಾರರು ಚುನಾವಣಾ ಬಹಿಷ್ಕಾರದ ಕೂಗಿದ್ದು, ಅಂತಿಮ ಕ್ಷಣದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ರಾಜಕೀಯ ಮುಖಂಡರು ಮಾತುಕತೆ ನಡೆಸಿ ಗ್ರಾಮಸ್ಥರನ್ನು ಮತದಾನ ನಡೆಸುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.