
ಕಾರ್ಕಳ: ಕ್ಯಾನ್ಸರ್ ರೋಗವನ್ನು ಆಯುರ್ವೇದಿಕ್ ಚಿಕಿತ್ಸೆ ಮೂಲಕ ಗುಣಪಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬೆಳ್ಳಣ್ ಗ್ರಾಮದ ರೊನಾಲ್ಡ್ ರೋಡ್ರಿಗಸ್(68) ಎಂಬವರ ಪತ್ನಿಗೆ ಕ್ಯಾನ್ಸರ್ ಕಾಯಿಲೆ ಇದ್ದು ಮಾ.23ರಂದು ಅವರು ತನ್ನ ಹೆಂಡತಿಯನ್ನು ಫಿಸಿಯೋಥೆರಫಿ ಬಗ್ಗೆ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಬಳಿಕ ರೋನಾಲ್ಡ್ ಅವರಿಗೆ ಉಡುಪಿಯ ಕಡಿಯಾಳಿ ದೇವಸ್ಥಾನದ ಬಳಿ ಸಿದ್ದಾರ್ಥ್ ಎಂಬ ಹೆಸರಿನ ವ್ಯಕ್ತಿಯ ಪರಿಚಯವಾಗಿದ್ದು, ಆತ ಆಯುರ್ವೇದಿಕ್ ಚಿಕಿತ್ಸೆ ಮೂಲಕ ನಿಮ್ಮ ಪತ್ನಿಯ ರೋಗ ಗುಣಪಡಿಸಬಹುದು ಎಂದು ನಂಬಿಸಿದ್ದನು
.ಅದರಂತೆ ರೋನಾಲ್ಡ್ ಸಿದ್ದಾರ್ಥ್ ಪರಿಚಯಿಸಿದ ಮಾಧವ ಎಂಬಾತ ಸೂಚಿಸಿದ ಅನಿಲ್ ಪವಾರ್ ಎಂಬ ಹೆಸರಿನ ಖಾತೆಗೆ ಹಣ ವರ್ಗಾವಣೆ ಮಾಡಿದ್ದರು. ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ 40,000ರೂ. ಹಣವನ್ನು ಸಿದ್ದಾರ್ಥ್ಗೆ ನೀಡಿದ್ದರು. ಅಲ್ಲದೆ ಆರೋಪಿ ಉಡುಪಿಯ ಆರ್ಯುವೇದಿಕ್ ಔಷಧಿ ಅಂಗಡಿಯಲ್ಲಿನ ಔಷದಿ ಖರೀದಿಸಿ ಸೇವಿಸಿದರೆ ಖಾಯಿಲೆ ಗುಣ ಆಗುತ್ತದೆ ಎಂದು ಹೇಳಿದ್ದು ಅದರಂತೆ ಅವರು 10,80,000ರೂ. ಮೊತ್ತದ ಚೆಕ್ ನೀಡಿ ಔಷಧಿ ಖರೀದಿಸಿದ್ದರು.
ಆದರೆ ಈ ಔಷಧಿಗಳನ್ನು ತಮ್ಮ ಪತ್ನಿಗೆ ನೀಡಿದರೂ ಈವರೆಗೆ ಗುಣಮುಖರಾಗದೇ ಇದ್ದ ಕಾರಣ ರೋನಾಲ್ಡ್ ಆರೋಪಿಗಳಿಗೆ ಕರೆ ಮಾಡಿದ್ದರು. ಆದರೆ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಆರೋಪಿಗಳು ರೋನಾಲ್ಡ್ ಹೆಂಡತಿಗೆ ಇರುವ ಖಾಯಿಲೆಯನ್ನು ಗುಣಪಡಿಸುವುದಾಗಿ ನಂಬಿಸಿ ಒಟ್ಟು 12,09,160ರೂ. ವಂಚಿಸಿರುವುದಾಗಿ ದೂರಲಾಗಿದೆ.
