
ಉಡುಪಿ: ನಗರ, ಗ್ರಾಮಾಂತರ ಭಾಗದಲ್ಲಿ ನೀರಿನ ಸಮಸ್ಯೆ ಬಗ್ಗೆ ಸೂಕ್ತ ಪರಿಹಾರ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಶೀಘ್ರವೇ ಮಳೆಯಾದಲ್ಲಿ ಪರಿಹಾರ ಸಿಗುವ ನಿರೀಕ್ಷೆಯಲ್ಲಿದ್ದೇವೆ ಎಂದು ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದರು. ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್ಯ ನಗರಸಭೆ ವ್ಯಾಪ್ತಿಯಲ್ಲಿ ರೇಶನಿಂಗ್ ವ್ಯವಸ್ಥೆಯಡಿ ನೀರು ಕೊಡುವ ವ್ಯವಸ್ಥೆ 5 ದಿನಕ್ಕೊಮ್ಮೆ ನಡೆಯುತ್ತಿದೆ. ಬಜೆ ಡ್ಯಾಂನಲ್ಲಿ ಇನ್ನು 3-4 ದಿನಕ್ಕೆ ಬೇಕಾಗುವಷ್ಟು ನೀರಿನ ಪ್ರಮಾಣವಿದೆ. ಸಮಸ್ಯೆ ಇರುವಲ್ಲಿ ಖಾಸಗಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಕಾರ್ಕಳ ಭಾಗದಲ್ಲಿ ಉತ್ತಮ ಮಳೆಯಾಗಿರುವುದರಿಂದ ನೀರಿನ ಹರಿವು ಆರಂಭಗೊಂಡಿದೆ ಎಂಬ ಮಾಹಿತಿ ಲಭಿಸಿದೆ ಎಂದರು. ಕಡಲತೀರದಲ್ಲಿ ಪ್ರಕ್ಷುಬ್ದತೆ ಮುಂದುವರಿದಿದ್ದು, ಪಡುಕೆರೆ ಭಾಗದಲ್ಲಿ ಕಡಲ್ಕೊರೆತವಿದೆ. ಈ ಬಗ್ಗೆ ಮೀನುಗಾರರಿಗೆ, ಸ್ಥಳೀಯರಿಗೆ ಸೂಚನೆ ನೀಡಲಾಗಿದೆ. ಕಡಲ್ಕೊರೆತಕ್ಕೆ ಪರಿಹಾರವಾಗಿ ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
