April 24, 2026
WhatsApp Image 2026-04-24 at 9.01.38 AM

ಬೆಳ್ತಂಗಡಿ: ಬಳಂಜ ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಬುಧವಾರ ರಾತ್ರಿ ನುಗ್ಗಿದ ಅಜಯ್ ಎಂಬಾತ ದೇವರ ವಿಗ್ರಹವನ್ನು ಭಗ್ನಗೊಳಿಸಿರುವ ಘಟನೆ ವರದಿಯಾಗಿದೆ.

ಬುಧವಾರ ರಾತ್ರಿ ಥಾರ್ ವಾಹನದಲ್ಲಿ ಬಂದ ಅಜಯ್, ದೇವಸ್ಥಾನದ ಪಕ್ಕದಲ್ಲಿರುವ ಸುಬ್ರಹ್ಮಣ್ಯ ಭಟ್ ಎಂಬುವವರ ಮನೆಗೆ ತೆರಳಿ ‘ಎನ್ನನ್ ಬಚಾವ್ ಮಲ್ಪಿ’ (ನನ್ನನ್ನು ಉಳಿಸಿ) ಎಂದು ಜೋರಾಗಿ ಕೂಗುತ್ತಾ ಮನೆ ಪ್ರವೇಶಿಸಲು ಯತ್ನಿಸಿದ್ದಾನೆ. ಮನೆಯವರು ಆತನನ್ನು ಗದರಿಸಿ ಅಲ್ಲಿಂದ ಕಳುಹಿಸಿದ್ದಾರೆ.ನಂತರ, ಆತ ಬಳಂಜ ದೇವಸ್ಥಾನದ ಪವಿತ್ರ ಜಳಕದ ಕೆರೆಗೆ ಹಾರಿ ಅಲ್ಲಿಂದ ನೇರವಾಗಿ ದೇವಸ್ಥಾನಕ್ಕೆ ಬಂದಿದ್ದಾನೆ. ಪಿಲ್ಲರ್ ಸಹಾಯದಿಂದ ದೇವಸ್ಥಾನದ ಮೇಲ್ಛಾವಣಿ ಏರಿ, ಹಂಚುಗಳನ್ನು ತೆಗೆದು ಒಳಪ್ರವೇಶಿಸಿದ್ದಾನೆ. ಬಳಿಕ ಕೊಡಮಣಿತ್ತಾಯ ದೈವದ ಸನ್ನಿಧಿಗೆ ಇಳಿದು, ಪೀಠದ ಮೇಲಿದ್ದ ಗಂಟೆಯನ್ನು ತೆಗೆದು ಹಂಚಿನ ಬಳಿ ಇಟ್ಟು ಅಪವಿತ್ರಗೊಳಿಸಿದ್ದಾನೆ.ಅಷ್ಟೇ ಅಲ್ಲದೆ, ತೀರ್ಥ ಮಂಟಪದ ಬಳಿ ಇದ್ದ ದೊಡ್ಡ ಗಂಟೆಯನ್ನು ಬಾರಿಸಿ, ಶ್ರೀ ಗೋಪಾಲಕೃಷ್ಣ ದೇವರ ಗರ್ಭಗುಡಿಯನ್ನು ಪ್ರವೇಶಿಸಿದ್ದಾನೆ. ಅಲ್ಲಿ ಪೂಜಿಸಲ್ಪಡುತ್ತಿದ್ದ ವಿಗ್ರಹವನ್ನು ಹೊರತೆಗೆದು ನೆಲಕ್ಕೆ ಎಸೆದು ಭಿನ್ನಗೊಳಿಸಿದ್ದಾನೆ. ಅಲ್ಲದೆ ಗರ್ಭಗುಡಿಯಲ್ಲಿದ್ದ ಪೂಜಾ ಪರಿಕರಗಳನ್ನು ಎಲ್ಲೆಂದರಲ್ಲಿ ಎಸೆದು ಅಸ್ತವ್ಯಸ್ತಗೊಳಿಸಿದ್ದಾನೆ. ಸ್ಥಳಕ್ಕೆ ಧಾವಿಸಿದ ವೇಣೂರು ಪೊಲೀಸರು ಅಜಯ್‌ನನ್ನು ವಿಚಾರಣೆ ನಡೆಸಿ, ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಿದ್ದಾರೆ ಎಂದು ವರದಿಯಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.