
ಉಡುಪಿ: ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಕಲ್ಲಾಪು ಬಳಿ ನಡೆದಿದೆ.
ಮೂಲತಃ ಬಾಗಲಕೋಟೆ ಹುನಗುಂದದ, ಪ್ರಸ್ತುತ ಕಟಪಾಡಿ ಸರಕಾರಿ ಗುಡ್ಡೆ ನಿವಾಸಿ ಭೀಮಪ್ಪ ಹುನ್ನಳ್ಳಿ ಮೃತ ಸವಾರ.
ಲಾರಿ ಚಾಲಕನ ಅಜಾಗರೂಕತೆಯ ಚಾಲನೆ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ಸಹ ಸವಾರ ಕಟಪಾಡಿ ನಾಯ್ಕರ ತೋಟದ ಸಾಗರ್ ಶೆಣೈ ಗಾಯಗೊಂಡಿದ್ದು, ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದ್ವಿಚಕ್ರ ವಾಹನ ಮತ್ತು ಲಾರಿ ಕಾಪುವಿನ ಕಡೆಗೆ ಸಾಗುತ್ತಿರುವ ಸಂದರ್ಭ ಕಲ್ಲಾಪು ಡೆವಿಯೇಷನ್ ಬಳಿ ಈ ಅಪಘಾತ ಸಂಭವಿಸಿದ್ದು, ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
