April 12, 2026
WhatsApp Image 2026-04-12 at 4.44.59 PM

ಮಂಗಳೂರು : ಪ್ರೀತಿಸಿದ ಯುವತಿಯ ವರ್ತನೆಯಿಂದ ಮನನೊಂದು ಯುವಕನೊಬ್ಬ ತನ್ನ ಮನೆಯಲ್ಲೇ ನೇಣಿಗೆ ಶರಣಾಗಿರುವ ಘಟನೆ ಮೂಡುಶೆಡ್ಡೆಯ ಎದುರುಪದವಿನಲ್ಲಿ ಸಂಭವಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಮತ್ತು ಆಕೆಯ ತಾಯಿಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಡುಶೆಡ್ಡೆ ನಿವಾಸಿ ಮಹಮ್ಮದ್ ಆಶಿಕ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಮಾರ್ಚ್ 21ರ ಈದ್ ಹಬ್ಬದ ಸಂಭ್ರಮದ ದಿನವೇ ಈ ದುರಂತ ನಡೆದಿದೆ. ಆರಂಭದಲ್ಲಿ ಇದೊಂದು ಸಾಮಾನ್ಯ ಆತ್ಮಹತ್ಯೆ ಪ್ರಕರಣ ಎಂದು ಭಾವಿಸಲಾಗಿತ್ತು. ಆದರೆ, ಆಶಿಕ್‌ನ ಮೊಬೈಲ್ ಪರಿಶೀಲಿಸಿದಾಗ ಆತನ ಸಾವಿನ ಹಿಂದಿರುವ ಪ್ರೇಮ ಪ್ರಕರಣ ಮತ್ತು ಯುವತಿಯ ಕಿರುಕುಳದ ವಿವರಗಳು ಬೆಳಕಿಗೆ ಬಂದಿವೆ.

ಆಶಿಕ್ ತನ್ನ ಕಾಲೇಜು ಸಹಪಾಠಿಯಾಗಿದ್ದ ಉಳ್ಳಾಲ ಮೂಲದ ಯುವತಿಯನ್ನು ಗಾಢವಾಗಿ ಪ್ರೀತಿಸುತ್ತಿದ್ದ. ಆದರೆ ಇತ್ತೀಚಿನ ದಿನಗಳಲ್ಲಿ ಯುವತಿ ಆತನಿಂದ ದೂರವಾಗತೊಡಗಿದ್ದಳು. ಸಾವಿಗೂ ಮುನ್ನ ಆಶಿಕ್ ಮತ್ತು ಯುವತಿಯ ನಡುವೆ ವಿಡಿಯೋ ಸಂಭಾಷಣೆ ನಡೆದಿದ್ದು, ಈ ವೇಳೆ ಯುವತಿ ಅತ್ಯಂತ ಅಶ್ಲೀಲ ಮತ್ತು ಕೆಟ್ಟದಾಗಿ ಆತನನ್ನು ನಿಂದಿಸಿರುವುದು ಮೊಬೈಲ್‌ನಲ್ಲಿ ದಾಖಲಾಗಿದೆ.

“ನೀನು ನನಗೆ ಮೋಸ ಮಾಡುತ್ತಿದ್ದೀಯಾ” ಎಂದು ಆಶಿಕ್ ನೋವಿನಿಂದ ಹೇಳಿದಾಗ, ಅದಕ್ಕೆ ಪ್ರತಿಯಾಗಿ ಯುವತಿಯು, “ನೀನು ಎಲ್ಲಿಯಾದರೂ ಹೋಗಿ ಸಾಯಿ, ನಾನು ಮತ್ತು ನನ್ನ ಗೆಳೆಯರು ನಿನ್ನ ಮೃತದೇಹದ ಕೂದಲನ್ನು ತೆಗೆಯಲು ಬರುತ್ತೇವೆ” ಎಂದು ಅಮಾನವೀಯವಾಗಿ ಮಾತನಾಡಿದ್ದಾಳೆ ಎನ್ನಲಾಗಿದೆ.

ಈ ಮಾತಿನಿಂದ ತೀವ್ರವಾಗಿ ನೊಂದ ಆಶಿಕ್, ಬೆಂಗಳೂರಿಗೆ ಪ್ರವಾಸ ಹೋಗುವವನು ಅದೇ ರಾತ್ರಿ ಮನೆಯಲ್ಲಿ ಲುಂಗಿಯಿಂದ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆಶಿಕ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಯುವತಿ ಮತ್ತು ಆಕೆಯ ತಾಯಿ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಆಶಿಕ್ ತಂದೆ ಮಹಮ್ಮದ್ ಹನೀಫ್ ಕಾವೂರು ಠಾಣೆಗೆ ದೂರು ನೀಡಿದ್ದಾರೆ. ಯುವತಿಯ ಪ್ರಚೋದನಾಕಾರಿ ಮಾತುಗಳೇ ತನ್ನ ಮಗನ ಸಾವಿಗೆ ನೇರ ಕಾರಣ ಎಂದು ಅವರು ಆರೋಪಿಸಿದ್ದಾರೆ.

ಪೊಲೀಸರು ಇದೀಗ ಯುವತಿ, ಆಕೆಯ ತಾಯಿ ಮತ್ತು ಮತ್ತೊಬ್ಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.