
ಮಡಿಕೇರಿ: ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳ ಮೂಲದ ಯುವತಿ ಶರಣ್ಯ (35) ಅವರನ್ನು ನಾಲ್ಕು ದಿನಗಳ ಬಳಿಕ ಅರಣ್ಯ ಇಲಾಖೆ ಹಾಗೂ ಪೊಲೀಸರ ತಂಡ ಸುರಕ್ಷಿತವಾಗಿ ಪತ್ತೆಹಚ್ಚಿದೆ.
ಕೋಝೀಕ್ಕೋಡ್ ನಿವಾಸಿಯಾಗಿರುವ ಶರಣ್ಯ ಅವರು ಎರ್ನಾಕುಲಂನಲ್ಲಿ ಐಟಿ ಉದ್ಯೋಗಿಯಾಗಿದ್ದು, ಕಕ್ಕಬ್ಬೆ ಗ್ರಾಮದ ಹೋಂಸ್ಟೇಯಲ್ಲಿ ತಂಗಿದ್ದರು. ಗುರುವಾರ ಬೆಳಿಗ್ಗೆ ತಡಿಯಂಡಮೋಳ್ ಬೆಟ್ಟ ಏರಲು ಅರಣ್ಯ ಇಲಾಖೆಯ ತಪಾಸಣಾ ಕೇಂದ್ರಕ್ಕೆ ಬಂದ ಅವರು, ಒಂಟಿಯಾಗಿ ಹೋಗಲು ಅವಕಾಶ ಇಲ್ಲದ ಕಾರಣ ಇತರೆ ಚಾರಣಿಕರ ತಂಡದೊಂದಿಗೆ ಕಳುಹಿಸಲ್ಪಟ್ಟಿದ್ದರು.
ಮಧ್ಯಾಹ್ನಕ್ಕೆ ವಾಪಸು ಬರುವ ನಿರೀಕ್ಷೆ ಇತ್ತು.ಆದರೆ ಸಮಯಕ್ಕೆ ಮರಳದ ಹಿನ್ನೆಲೆಯಲ್ಲಿ ಆತಂಕ ಮೂಡಿತು. ಹೋಂಸ್ಟೇ ಮಾಲೀಕ ನಂದ ಅವರು ಕರೆ ಮಾಡಿದಾಗ ಮೊಬೈಲ್ ಸಂಪರ್ಕವಾಗಿರಲಿಲ್ಲ. ನಂತರ ಸಂಪರ್ಕವಾದಾಗ, ತಾನು ಕಾಡಿನಲ್ಲಿ ದಾರಿ ತಪ್ಪಿರುವುದಾಗಿ ಶರಣ್ಯ ತಿಳಿಸಿದ್ದರು. ತಕ್ಷಣವೇ ಅರಣ್ಯ ಇಲಾಖೆ ಹಾಗೂ ಪೊಲೀಸರು ಶೋಧ ಕಾರ್ಯ ಆರಂಭಿಸಿದರು.ಆದರೆ ಆರಂಭಿಕ ದಿನಗಳಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಕಾಡಿನೊಳಗೆ ಅಲೆದಾಡಿ ನಿತ್ರಾಣಗೊಂಡ ಶರಣ್ಯ, ಕೊನೆಗೆ ಅರಣ್ಯದೊಳಗಿನ ಪಾಳುಬಿದ್ದ ಬಂಗಲೆಯೊಂದರಲ್ಲಿ ಆಶ್ರಯ ಪಡೆದುಕೊಂಡು ಅಲ್ಲೇ ಉಳಿದುಕೊಂಡಿದ್ದರು.
ಹೊರಬರುವ ದಾರಿ ತಿಳಿಯದ ಕಾರಣ ಅವರು ನಾಲ್ಕು ದಿನಗಳ ಕಾಲ ಅಲ್ಲೇ ಕಳೆದಿದ್ದರು.ನಂತರ ಅರಣ್ಯ ಇಲಾಖೆ, ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದಿಂದ ಶರಣ್ಯರನ್ನು ಪತ್ತೆಹಚ್ಚಿ ರಕ್ಷಿಸಲಾಯಿತು. ಅವರು ದಣಿದ ಸ್ಥಿತಿಯಲ್ಲಿ ಇದ್ದರೂ ಜೀವಾಪಾಯದಿಂದ ಪಾರಾಗಿದ್ದಾರೆ.ಇದೇ ವೇಳೆ, ಬೆಟ್ಟ ಪ್ರದೇಶದ ಕುಡಿಯ ಜನಾಂಗದವರು ಯುವತಿ ಸುರಕ್ಷಿತವಾಗಿ ಮರಳಲೆಂದು ತಮ್ಮ ಆರಾಧ್ಯ ದೈವ ಮಲೆ ತಮ್ಮಚ್ಚ ದೇವರಿಗೆ ಹರಕೆ ಹೊತ್ತಿದ್ದರು ಎಂಬುದು ತಿಳಿದುಬಂದಿದೆ.
