
ಕಾರ್ಕಳ: ಮನೆಯಲ್ಲಿ ಕುರ್ಚಿಯಲ್ಲಿ ಕುಳಿತುಕೊಂಡಿದ್ದ ಯುವಕನೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಕಾರ್ಕಳದ ಯರ್ಲಪಾಡಿ ಎಂಬಲ್ಲಿ ನಡೆದಿದೆ. ಯರ್ಲಪಾಡಿ ಗ್ರಾಮದ ಸುಹೇಶ್(22) ಮೃತರು.
ಕಳೆದ 15 ದಿನಗಳಿಂದ ಕೆಮ್ಮುವಿನಿಂದ ಬಳಲುತ್ತಿದ್ದ ಸುಹೇಶ್ ಔಷಧಿ ಸೇವಿಸುತ್ತಿದ್ದರು. ಫೆ.19ರಂದು ಮಧ್ಯಾಹ್ನ ಮನೆಯ ಡೈನಿಂಗ್ ರೂಮ್ನ ಕುರ್ಚಿಯಲ್ಲಿ ಕುಳಿತು ಕೊಂಡಿದ್ದ ಅವರು, ಒಮ್ಮೆಲೆ ಬೊಬ್ಬೆ ಹಾಕುತ್ತಾ ಕೆಳಗೆ ಬಿದ್ದರೆನ್ನಲಾಗಿದೆ.
ಬಳಿಕ ನರಳಾಡಿ ತೀವ್ರವಾಗಿ ಅಸ್ವಸ್ಥಗೊಂಡ ಅವರನ್ನು ಕೂಡಲೇ ಕಾರ್ಕಳದ ಖಾಸಗಿ ಆಸ್ಫತ್ರೆಗೆ ಕರೆದುಕೊಂಡು ಹೋದರು, ಆದರೆ ಅಲ್ಲಿ ಪರೀಕ್ಷಿಸಿದ ವೈದ್ಯರು ಸುಹೇಶ್ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಿಂದ ತಿಳಿದುಬಂದಿದೆ.
