ವೇಣೂರು ಸದಾಶಿವ ಕುಲಾಲರ 51ರ ಯಕ್ಷಪಯಣಎ. 11ರಂದು ವೇಣೂರಿನಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ

ವೇಣೂರು: ಪ್ರಸಿದ್ಧ ಯಕ್ಷಗಾನ ಕಲಾವಿದರು, ದಿಗಿಣದ ರಾಜ ಎಂದೇ ಖ್ಯಾತಿಯಾಗಿರುವ ವೇಣೂರು ಸದಾಶಿವ ಕುಲಾಲ್ ಅವರ ೫೧ರ ಯಕ್ಷಪಯಣದ ಸಂಭ್ರಮದ ಹಿನ್ನೆಲೆಯಲ್ಲಿ ಎ. ೧೧ರಂದು ರಾತ್ರಿ ೮ ಗಂಟೆಯಿಂದ ವೇಣೂರು ಮುಖ್ಯಪೇಟೆಯ ಗಾರ್ಡನ್ ವ್ಯೂ ಬಳಿ ಶ್ರೀ ಹನುಮಗಿರಿ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಜರಗಲಿದೆ.
ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ, ಚಿನ್ನಯ ಭಟ್ ಕಲ್ಲಡ್ಕ ಹಾಗೂ ಪ್ರಧಾನ ಭೂಮಿಕೆಯಲ್ಲಿ ಸುಪ್ರಸಿದ್ಧ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ದಿ. ಕೆ. ನರಸಿಂಹ ಪೈ, ದಿ. ಪಿ. ನರಸಿಂಹ ರಾವ್ ಪಂಜಾಲಬೈಲು, ದಿ. ಡಾ. ಬಿ.ಪಿ. ಇಂದ್ರ, ದಿ. ಜೋಸೆಫ್ ಮಿನೇಜಸ್ ಹಾಗೂ ವೇಣೂರು ಸುಂದರ ಆಚಾರ್ಯ ಅವರ ಸಂಸ್ಕರಣೆ ನಡೆಯಲಿದೆ.
೫೧ನೇ ವರ್ಷದ ತಿರುಗಾಟ
ಶ್ರೀ ಹನುಮಗಿರಿ ಮೇಳದ ಕಲಾವಿದ, ತೆಂಕುತಿಟ್ಟಿನ ಅನುಭವೀ ಪುಂಡುವೇಷಧಾರಿ ಸದಾಶಿವ ಕುಲಾಲ್ ವೇಣೂರು ಅವರು ಕಳೆದ ವರ್ಷ ತಿರುಗಾಟದ ಸುವರ್ಣ ಸಂಭ್ರಮವನ್ನು ಆಚರಿದ್ದರು. ೨೦೨೨-೨೩ನೇ ಸಾಲು ಇವರ ಐವತ್ತೊಂದನೇ ತಿರುಗಾಟ.
ಆಕರ್ಷಕ ರೂಪ ಮತ್ತು ಆಳಂಗವನ್ನು ಹೊಂದಿದ ಇವರು ಸ್ತ್ರೀ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದರು. ಬಳಿಕ ಪುಂಡುವೇಷಧಾರಿಯಾಗಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಕಿರೀಟವೇಷಗಳನ್ನೂ ನಿರ್ವಹಿಸುತ್ತಿದ್ದಾರೆ. ರೂಪವು ದೇವರ ಕೊಡುಗೆ. ಅದರ ಜತೆಗೆ ತನ್ನ ಪ್ರತಿಭಾವ್ಯಾಪಾರದಿಂದ ಆಕರ್ಷಕವಾದ ಪ್ರವೇಶ, ಗಿರಕಿ, ಕುಣಿತಗಳಿಂದ ರಂಗದಲ್ಲಿ ಮೆರೆದ ಕಲಾವಿದರಿವರು. ಅದಕ್ಕಾಗಿ ಇವರನ್ನು ದಿಗಿಣದ ರಾಜ್ಯ ಎಂದೇ ಕರೆಯಲಾಗಿದೆ. ವೇಣೂರಿನಲ್ಲಿ ಮಕ್ಕಳಿಗೆ ಶಿಶು ಮಂದಿರದ ಮೂಲಕ ಯಕ್ಷತರಬೇತಿಯನ್ನೂ ನೀಡುತ್ತಿದ್ದಾರೆ. ವಿವಿಧ ಶಾಲೆಯ ಮಕ್ಕಳಿಗೆ ಪಾತ್ರಕ್ಕೆ ಬೇಕಾದ ಬಣ್ಣ ಹಚ್ಚುವ ಕಾರ್ಯವನ್ನೂ ಮಾಡುತ್ತಾರೆ.
ಗಡ್ಡ, ಮೀಸೆ ತಯಾರಿಕೆಯಲ್ಲೂ ನಿಪುಣರು
ಯಕ್ಷಗಾನ ವೇಷಭೂಷಣ ತಯಾರಿಕೆಯನ್ನೂ ಇವರು ಬಲ್ಲವರು. ಅದರಲ್ಲೂ ವಿಶೇಷವಾಗಿ ಬೇರೆ ಬೇರೆ ವೇಷಗಳಿಗೆ ಬೇಕಾದಂತೆ ಗಡ್ಡ ಮತ್ತು ಮೀಸೆಗಳನ್ನು ತಯಾರಿಸುವ ಕಲೆಯು ಇವರಿಗೆ ಕರಗತವಾಗಿದೆ. ಬಹಳಷ್ಟು ಕಲಾವಿದರು ವೇಣೂರು ಶ್ರೀ ಸದಾಶಿವ ಕುಲಾಲರು ತಯಾರಿಸಿ ಕೊಟ್ಟ ಮೀಸೆ ಗಡ್ಡಗಳನ್ನು ಉಪಯೋಗಿಸಲು ಬಯಸುತ್ತಾರೆ. ವೇಣೂರು ಶ್ರೀ ಸದಾಶಿವ ಕುಲಾಲರು ಯಕ್ಷಗಾನ ತಿರುಗಾಟ ಆರಂಭಿಸಿದ್ದು ಸುರತ್ಕಲ್ ಮೇಳದಲ್ಲಿ. ಖ್ಯಾತ ಕಲಾವಿದ ಶ್ರೀ ಡಿ. ಮನೋಹರ ಕುಮಾರರ ಜತೆ ಬಾಲಗೋಪಾಲನಾಗಿ ರಂಗಪ್ರವೇಶ. ವೇಣೂರು ಸದಾಶಿವ ಕುಲಾಲರು ದಿನಕರ ಭಟ್ ಮಾವೆ ಅವರ ಹೇಳಿಕೆಯಂತೆ ಎರಡು ಬಾರಿ ವಿದೇಶ ಯಾತ್ರೆ ಕೈಗೊಂಡು ಮಸ್ಕತ್‌ನಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಮುಂಬಯಿ ಪ್ರದರ್ಶನಗಳಲ್ಲೂ ಕಾಣಿಸಿಕೊಂಡಿದ್ದಾರೆ. ನಿಡ್ಲೆ ಗೋವಿಂದ ಭಟ್ಟರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಮಳೆಗಾಲದ ಪ್ರದರ್ಶನಗಳಲ್ಲಿ ೨೫ ವರ್ಷ ಭಾಗವಹಿಸಿರುತ್ತಾರೆ. ಪುತ್ತೂರು ಶ್ರೀಧರ ಭಂಡಾರಿಗಳ ಶ್ರೀ ಮಹಾಲಿಂಗೇಶ್ವರ ಸಂಚಾರಿ ಯಕ್ಷಗಾನ ಮಂಡಳಿಯಲ್ಲಿ ಎರಡು ವರ್ಷ ಭಾಗವಹಿಸಿರುತ್ತಾರೆ. ವೇಣೂರು ಸದಾಶಿವ ಕುಲಾಲರು ತಿರುಗಾಟ ಆರಂಭಿಸಿ ೫೦ ವರ್ಷಗಳು ಕಳೆದುವು. ಆರ್ಥಿಕವಾಗಿ ಶ್ರೀಮಂತರಲ್ಲದ ಮಧ್ಯಮ ವರ್ಗದಲ್ಲಿ ಜೀವನ ನಡೆಸುತ್ತಿರುವ ಸದಾಶಿವ ಕುಲಾಲರು ವೇಣೂರು ಮುಖ್ಯಪೇಟೆಯ ಸನಿಹದ ಶ್ರೀ ದೇವಿ ನಿವಾಸದಲ್ಲಿ ಪತ್ನಿ, ಪುತ್ರ ಹಾಗೂ ಪುತ್ರಿಯೊಂದಿಗೆ ಸಾಂಸಾರಿಕ ಜೀವನ ನಡೆಸುತ್ತಿದ್ದಾರೆ. ದೊಡ್ಡ ಪುತ್ರಿಯನ್ನು ಮದುವೆ ಮಾಡಿಕೊಡಲಾಗಿದೆ.

Check Also

ಬೆಳ್ತಂಗಡಿ : ಮನೆಯಂಗಳದಲ್ಲಿ ಆಟವಾಡುತ್ತಿದ್ದ 2 ವರ್ಷದ ಮಗು ಕೆರೆಗೆ ಬಿದ್ದು ಮೃತ್ಯು

ಬೆಳ್ತಂಗಡಿ: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವೊಂದು ತೋಟದ ಕೆರೆಯ ಬಳಿಗೆ ಹೋಗಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಗುರುವಾರ ಧರ್ಮಸ್ಥಳದ …

Leave a Reply

Your email address will not be published. Required fields are marked *

You cannot copy content of this page.