ವೇಣೂರು, ಮಾ. 2: ಸತತ ೩ ಬಾರಿ ಕರ್ನಾಟಕ ರಾಜ್ಯದ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ ಪುರಸ್ಕೃತ ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸಾಟಿ (ಗೌಡರ ಯುವ ಸೇವಾ ಸಂಘ ರಿ. ಸುಳ್ಯ ಪ್ರವರ್ತಿತ) ಇದರ ೨೧ನೇ ನೂತನ ಶಾಖೆಯು ವೇಣೂರು ಮಹಾವೀರ ನಗರದ ಮಂಜುಶ್ರೀ ಕಾಂಪ್ಲೆಕ್ಸ್ನಲ್ಲಿ ರವಿವಾರ ಉದ್ಘಾಟನೆಗೊಂಡಿತು.
ಮಂಗಳೂರು ವಿ.ಜಿ.ಎಸ್. ಸೌಹಾರ್ದ ಸಹಕಾರಿ ಇದರ ಅಧ್ಯಕ್ಷ ಕೆ. ಲೋಕಯ್ಯ ಗೌಡ ಅವರು ನೂತನ ಶಾಖೆಯನ್ನು ಉದ್ಘಾಟಿಸಿ, ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ಸಾಧನೆ ಮಾಡಿದ ಸಹಕಾರಿ ಸಂಘಗಳಲ್ಲಿ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸಾಟಿ ಮುಂಚೂಣಿಯಲ್ಲಿದೆ. ಸಿವಿಲ್ ನೆಪದಲ್ಲಿ ಆರ್ಥಿಕ ಸಹಾಯವಾಗದ ರಾಷ್ಟ್ರೀಕೃತ ಬ್ಯಾಂಕ್ಗಳಿಂದ ನೊಂದಿರುವ ಜನರಿಗೆ ಹೆಚ್ಚಿನ ಮತ್ತು ಅನಾಗತ್ಯ ದಾಖಲೆಗಳನ್ನು ಕೇಳದೆ ಧೈರ್ಯ ಮತ್ತು ವಿಶ್ವಾಸದಿಂದ ಸಹಕಾರ ಸಂಘಗಳು ಕ್ಲಪ್ತ ಸಮಯದಲ್ಲಿ ಸಾಲ ನೀಡುತ್ತವೆ. ಪ್ರಾಮಾಣಿಕತೆ ಮತ್ತು ವ್ಯವಹಾರದ ಚಾಕಾಚಕ್ಯತೆಯಿಂದ ವೆಂಕಟರಮಣ ಕ್ರೆಡಿಟ್ ಕೋ ಸೊಸೈಟಿ ಇಷ್ಟೊಂದು ಬೆಳೆಯಲು ಕಾರಣವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷರಾದ ಪಿ.ಸಿ. ಜಯರಾಮ್ ಮಾತನಾಡಿ, ಸಂಘದ ಎಲ್ಲಾ ನಿರ್ದೇಶಕರ ಸಹಕಾರದಿಂದ ನಮ್ಮ ಯೋಚನೆಗಳು ಯೋಜನೆಗಳಾಗಿ ಸಂಘ ಇಂದು ೨೧ ಶಾಖೆ ತೆರೆಯಲು ಕಾರಣವಾಗಿದೆ. ರಜತ ಸಂಭ್ರಮದಲ್ಲಿ ನಮ್ಮ ಸೊಸಾಟಿ ೨೫ನೇ ಶಾಖೆ ತೆರೆಯಲು ಚಿಂತನೆ ನಡೆಸಿದೆ. ವಾರ್ಷಿಕ ರೂ. ೮೦೦ ಕೋಟಿಯಷ್ಟು ವ್ಯವಹಾರ ನಡೆಸಿದ್ದು, ರೂ. ೧೫೩ ಕೋಟಿ ಠೇವಣಿ ಹೊಂದಿದೆ. ರೂ. ೧೪೭ ಕೋಟಿಯಷ್ಟು ಸಾಲ ವಿತರಿಸಿದ್ದೇವೆ. ಸಂಘವು ನಿರಂತರ ಲಾಭದಲ್ಲಿದ್ದು, ರಾಜ್ಯದಲ್ಲಿ ಅತೀ ಹೆಚ್ಚು ಮುದ್ರಾಂಕ ಶುಲ್ಕ ಪಡೆದು ಮತ್ತು ಇಸ್ಟಾಂಪಿಂಗ್ ಪ್ರತಿಗಳನ್ನು ಮುದ್ರಿಸಿ ಗ್ರಾಹಕರಿಗೆ ಮಾರಾಟ ಮಾಡಿರುವ ಸಹಕಾರ ಸಂಘಗಳ ಪೈಕಿ ದ್ವಿತೀಯ ಸ್ಥಾನ ಲಭಿಸಿದ್ದು, ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದೆ ಎಂದರು.
ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಪಿ. ತಿಮ್ಮಪ್ಪ ಗೌಡ ಬೆಳಾಲು ಪ್ರಥಮ ಠೇವಣಿ ಪತ್ರದ ವಿತರಣೆ ನಡೆಸಿದರು. ವೇಣೂರಿನ ಉದ್ಯಮಿ ನವೀನ್ಚಂದ್ ಬಳ್ಳಾಲ್ ಗಣಕೀಕರಣದ ಉದ್ಘಾಟನೆ, ಕಟ್ಟಡ ಮಾಲಕ ಕೆ. ಉದಯ ಕುಮಾರ್ ಕಂಬಳಿ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪ್ರಥಮ ಪಾಲುಪತ್ರ, ಪ್ರಥಮ ಉಳಿತಾಯ ಖಾತೆ ಪತ್ರದ ವಿತರಣೆ ನಡೆಯಿತು.
ಸೊಸೈಟಿಯ ನಿರ್ದೇಶಕರುಗಳಾದ ನಿತ್ಯಾನಂದ ಮುಂಡೋಡಿ, ಕೆ.ಸಿ. ಸದಾನಂದ, ಪಿ.ಎಸ್. ಗಂಗಾಧರ, ದಾಮೋದರ ಎನ್.ಎಸ್., ಎ.ವಿ. ತೀರ್ಥರಾಮ, ಚಂದ್ರಾ ಕೋಲ್ಚಾರ್, ಕೆ. ನಾರಾಯಣ ಗೌಡ, ಜಯಲಲಿತಾ ಕೆ.ಎಸ್., ನಳಿನಿ ಸೂರಯ್ಯ, ಲತಾ ಎಸ್. ಮಾವಜಿ, ಹೇಮಚಂದ್ರ ಐ.ಕೆ., ಶೈಲೇಶ್ ಅಂಬೆಕಲ್ಲು, ನವೀನ್ ಕುಮಾರ್ ಜೆ.ವಿ. ಹಾಗೂ ವಿವಿಧ ಶಾಖೆಗಳ ಸಿಬ್ಬಂದಿ ಉಪಸ್ಥಿತರಿದ್ದರು. ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ವೇಣೂರು ಗ್ರಾ.ಪಂ. ಅಧ್ಯಕ್ಷ ನೇಮಯ್ಯ ಕುಲಾಲ್ ಭೇಟಿ ನೀಡಿದರು.
ಸಮ್ಮಾನ
ಕಟ್ಟಡ ಮಾಲಿಕ ಕೆ. ಉದಯ ಕುಮಾರ್ ಕಂಬಳಿ ಅವರಿಗೆ ಸಮ್ಮಾನ ಹಾಗೂ ಶಾಖೆಯ ಸ್ಥಾಪನೆಗೆ ಸಹಕಾರ ನೀಡಿದ ಕೆ. ಶಿವಶಂಕರ ಭಟ್ ಅವರನ್ನು ಗೌರವಿಸಲಾಯಿತು.
ಕು| ಶ್ರುತಿ ಪ್ರಾರ್ಥಿಸಿ, ನಿರ್ದೇಶಕ ಜಾಕೆ ಸದಾನಂದ ಪ್ರಾಸ್ತಾವಿಸಿದರು. ಸೊಸೈಟಿಯ ಉಪಾಧ್ಯಕ್ಷ ಮೋಹರಾಂ ಸುಳ್ಳಿ ಸ್ವಾಗತಿಸಿ, ನಿರ್ದೇಶಕ ದಿನೇಶ್ ಮಡಪ್ಪಾಡಿ ನಿರೂಪಿಸಿದರು. ಕಾರ್ಯನಿರ್ವಣಾಧಿಕಾರಿ ಕೆ.ಟಿ. ವಿಶ್ವನಾಥ ವಂದಿಸಿದರು.
Check Also
ಬೆಳ್ತಂಗಡಿ : ಮನೆಯಂಗಳದಲ್ಲಿ ಆಟವಾಡುತ್ತಿದ್ದ 2 ವರ್ಷದ ಮಗು ಕೆರೆಗೆ ಬಿದ್ದು ಮೃತ್ಯು
ಬೆಳ್ತಂಗಡಿ: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವೊಂದು ತೋಟದ ಕೆರೆಯ ಬಳಿಗೆ ಹೋಗಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಗುರುವಾರ ಧರ್ಮಸ್ಥಳದ …