![](https://thrishulnews.com/wp-content/uploads/2024/03/WhatsApp-Image-2024-03-12-at-11.54.26-AM.jpeg)
ಮಂಗಳೂರು: ನಗರದ ಸಭಾಂಗಣದಲ್ಲಿ ಯುವಕನೊಬ್ಬನ ಹೊರಗೆ ಬಿಟ್ಟಿದ್ದ ಚಪ್ಪಲಿ ನಾಪತ್ತೆಯಾಗಿ ಇದಕ್ಕಾಗಿ 112 ನಂಬರಿಗೆ ಕರೆ ಮಾಡಿ ಪೊಲೀಸರನ್ನು ಕರೆಸಿಯಿಸಿದ ಸ್ವಾರಸ್ಯಕರ ಘಟನೆ ಭಾನುವಾರ ನಗರದಲ್ಲಿ ನಡೆದಿದೆ.
ಶರವು ದೇವಸ್ಥಾನದ ಸಮೀಪದ ಸಭಾಂಗಣಕ್ಕೆ ಆಗಮಿಸಿದ್ದ ಯುವಕ ಚಪ್ಪಲಿಯನ್ನು ಹೊರಗೆ ಬಿಟ್ಟಿದ್ದು ವಾಪಾಸ್ ಬಂದಾಗ ಅಲ್ಲಿರಲಿಲ್ಲ. ಹೀಗಾಗಿ 112 ನಂಬರಿಗೆ ಕರೆ ಮಾಡಿ ದೂರು ದಾಖಲಿಸಿದ್ದಾನೆ. ಈ ದೂರನ್ನು ಪರಿಶೀಲಿಸುವಂತೆ ಬಂದರು ಠಾಣೆಗೆ ಸಂದೇಶ ಬಂದಿತ್ತು. ಇದನ್ನು ನೋಡಿ ಪೊಲೀಸರೂ ಸುಸ್ತು ಬಿದ್ದಿದ್ದಾರೆ. ಆದರೆ ದೂರನ್ನು ನಿರ್ಲಕ್ಷಿಸುವ ಹಾಗಿಲ್ಲವಲ್ಲ. ಹೀಗಾಗಿ ಕರ್ತವ್ಯದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಯುವಕ ಚಪ್ಪಲಿ ಕಳವಾಗಿರುವ ವಿಷಯ ಅವರಿಗೆ ತಿಳಿಸಿದ್ದಾನೆ.
ಪೊಲೀಸರು ಕೂಡ ಹುಡುಕಾಡಿದ್ದಾರೆ. ಸ್ಥಳದಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆ ಹಿಡಿಯಲ್ಪಟ್ಟ ದೃಶ್ಯಾವಳಿಗಳನ್ನು ಕೂಡಾ ಪರಿಶೀಲಿಸಿದ್ದಾರೆ. ಆಗ ಸಭಾಂಗಣಕ್ಕೆ ಮಾರುಕಟ್ಟೆಯಿಂದ ಸಾಮಗ್ರಿ ಹಾಕಲು ಬಂದಿದ್ದ ವ್ಯಕ್ತಿಯೊಬ್ಬ ಚಪ್ಪಲಿ ಹಾಕಿಕೊಂಡು ಹೋಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಠಾಣೆಗೆ ಬಂದು ದೂರು ನೀಡುವಂತೆ ಯುವಕನಲ್ಲಿ ಪೊಲೀಸರು ತಿಳಿಸಿದ್ದು, ಯುವಕ ದೂರು ನೀಡದೆ ತೆರಳಿದ್ದಾನೆ ಎಂದು ಹೇಳಲಾಗಿದೆ. ಕಳೆದು ಹೋದ ಚಪ್ಪಲಿಯ ಮೌಲ್ಯ ಎಷ್ಟೆಂದು ಮಾತ್ರ ತಿಳಿದು ಬಂದಿಲ್ಲ.
ಚಪ್ಪಲಿ ಕಳೆದುಕೊಂಡ ಮಾತ್ರಕ್ಕೆ ಪೊಲೀಸರನ್ನು ಕರೆಸುವ ಅಗತ್ಯವಿತ್ತೇ ? ಕ್ಷುಲಕ ಕಾರಣಕ್ಕೂ ಪೊಲೀಸರನ್ನು ಕರೆಸುವುದರಿಂಡ ಅವರು ರೋಸಿ ಹೋಗಿ ಮುಂದೆ ನಿಜಕ್ಕೂ ಅಗತ್ಯವಿದ್ದಾಗ ತತಕ್ಷಣ ಸ್ಪಂದಿಸದೇ ಇರುವ ಸಂದರ್ಭ ಸೃಷ್ಟಿಯಾದರೇ ಎಂದು ಕೆಲವರು ಪ್ರಶ್ನಿಸಿದ್ದಾರೆ.