ಕಾರವಾರ : ತುಳುನಾಡಿನ ಕಾರಣಿಕ ಪಂಜುರ್ಲಿ ದೈವದ ಕಥಾಹಂದರವಿರುವ ಕನ್ನಡದ ಕಾಂತಾರ ಸಿನಿಮಾ ರಾಜ್ಯ, ದೇಶ ಮಾತ್ರವಲ್ಲ ಜಾಗತಿಕವಾಗಿ ಸದ್ದು ಮಾಡಿದೆ.
ಈ ಸಿನಿಮಾ ಬಂದ ನಂತರ ಪಂಜುರ್ಲಿ ದೈವದ ಪೂಜೆ ಹಾಗೂ ಕಾಡು ಹಂದಿಯ ಪೂಜೆ ಮಾಡುವ ಬಗ್ಗೆ ಹೆಚ್ಚಿನ ನಂಬಿಕೆ ಬಂದಿತ್ತು.
ಇದೇ ರೀತಿಯ ಉತ್ತರ ಕನ್ನಡ ಜಿಲ್ಲೆಯ ಕುಟುಂಬವೊಂದು ಕಳೆದ 5 ವರ್ಷಗಳಿಂದ ಪಂಜುರ್ಲಿ ದೈವದ ರೀತಿ ಪೂಜೆ ಮಾಡುತ್ತಿದ್ದ ಕಾಡು ಹಂದಿಯನ್ನು ದುಷ್ಕರ್ಮಿಗಳು ಬಾಂಬ್ಇಟ್ಟು ಕೊಲೆ ಮಾಡಿರುವ ದುರ್ಘಟನೆ ಕಾರವಾರ ತಾಲೂಕಿನ ಚೆಂಡಿಯಾದ ಜನತಾ ಕಾಲೋನಿಯಲ್ಲಿ ನಡೆದಿದೆ.
ದುಷ್ಕರ್ಮಿಗಳು ಕಾಡು ಹಂದಿಗೆ ಕೋಳಿ ಮಾಂಸದಲ್ಲಿ ನಾಡಬಾಂಬ್ ಇಟ್ಟು ಹತ್ಯೆ ಮಾಡಿದ್ದು, ಚೆಂಡಿಯ ಜನತಾ ಕಾಲೋನಿಯ ಜನರ ಪ್ರೀತಿ ಸಂಪಾದಿಸಿ ಅವರಿಂದಲೇ ದೈವ ಎಂದು ಪೂಜೆಗೆ ಒಳಗಾಗುತ್ತಿದ್ದ ಕಾಡು ಹಂದಿ ಸಾವಿನಿಂದ ಇಡೀ ಗ್ರಾಮದಲ್ಲಿ ಮೌನ ಆವರಿಸಿದೆ.
ಗ್ರಾಮಸ್ಥರು ಕಣ್ಣೀರಿಟ್ಟು ದುಷ್ಕರ್ಮಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.ಇನ್ನು ಈ ಹಂದಿ ಯಾರಿಗೂ ತೊಂದರೆ ಕೊಡದೇ ಸಂಪನ್ನನಂತೆ ಗ್ರಾಮಸ್ಥರೊಂದಿಗೆ ಹೊಂದಿಕೊಂಡಿತ್ತು.
ಹೀಗಾಗಿ, ಊರಿನ ಜನರ ಪ್ರೀತಿ ಸಂಪಾದಿಸಿ ಪೂಜಿಸಲ್ಪಡುತ್ತಿದ್ದ ಕಾಡು ಹಂದಿಗೆ ಆಹಾರವಾಗಿ ಕಾಳು, ಕಡಿ ಸೇರಿದಂತೆ ತಾವು ಊಟ ಮಾಡುವ ಆಹಾರವನ್ನೂ ಹಾಕುತ್ತಿದ್ದರು.