ಉಡುಪಿ: ಬಾವಿ ಸ್ವಚ್ಛ ಮಾಡಲು ಇಳಿದ ಇಬ್ಬರು ವ್ಯಕ್ತಿಗಳ ಪೈಕಿ ಓರ್ವ ಸಾವನ್ನಪ್ಪಿದರೆ ಮತ್ತೊಬ್ಬನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ಬುಧವಾರ ಸಂಜೆ ಬ್ರಹ್ಮಾವರ ಮಹಾಲಿಂಗೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ದೇವಾಡಿಗರ ಬೆಟ್ಟುವಿನಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ದುರ್ಗೇಶ್ (34) ಮೃತಪಟ್ಟವರು. ಅಡಿವೆಪ್ಪ ಕುರಿ (50) ರಕ್ಷಣೆಗೊಳಗಾದವರು. ಇಬ್ಬರು ಕೂಡ ಕೊಪ್ಪಳ ಜಿಲ್ಲೆಯವರಾಗಿದ್ದು, ಬ್ರಹ್ಮಾವರದ ಸಾಲಿಕೆರೆಯಲ್ಲಿ ವಾಸಮಾಡಿಕೊಂಡು ಕೂಲಿ ಕೆಲಸ ಮಾಡುತ್ತಿದ್ದರು. 35 ಅಡಿ ಆಳದ ಬಾವಿ ಅದಾಗಿತ್ತು. ಕೆಸರು ಇದೆ ಎಂದು ಬಾವಿಯೊಳಗೆ ಬ್ಲೀಚಿಗ್ ಪೌಡರ್ ಹಾಕಿ ಸ್ವಚ್ಛ ಮಾಡುತ್ತಿದ್ದರು. ಆಕ್ಸಿಜನ್ ಕೊರತೆಯಾಗಿರುವುದೇ ಸಾವಿಗೆ ಕಾರಣ ಎನ್ನಲಾಗುತ್ತಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.