ಬಿಲ್ಲವ ಮುಖಂಡ, ನಾರಾಯಣಗುರು ವಿಚಾರ ವೇದಿಕೆಯ ರಾಜಾಧ್ಯಕ್ಷ ಸತ್ಯಜಿತ್ ಸುರತ್ಕಲ್‌ರವರ ತೇಜೋವಧೆ ಮಾಡಿದರೆ ಉಗ್ರ ಪ್ರತಿಭಟನೆ: ಬಿಲ್ಲವ ಸಂಘಟನೆಗಳಿಂದ ಎಚ್ಚರಿಕೆ

ಬೆಳ್ತಂಗಡಿ, ಮೇ 1: ಸಾಮಾಜಿಕ ಜಾಲತಾಣದಲ್ಲಿ ಬಿಲ್ಲವ ಸಮಾಜದ ಮುಖಂಡ, ಶೋಷಿತರ ಧ್ವನಿ ಸತ್ಯಜಿತ್ ಸುರತ್ಕಲ್‌ರನ್ನು ಬೆಳ್ತಂಗಡಿ ಶಾಸಕರು ಹಾಗೂ ಇವರ ಬೆಂಬಲಿಗರು ತೇಜೋವಧೆ ಮಾಡುತ್ತಿದ್ದು, ಇದು ಮುಂದುವರಿದರೆ ಸೂಕ್ತ ಕಾನೂನು ಕ್ರಮಗಳ ಉತ್ತರದ ಜತೆ ಬಿಲ್ಲವ ಸಮಾಜದ ಉಗ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ, ಯುವವಾಹಿನಿ ಘಟಕ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಸಂಘಟನೆಗಳ ಪರವಾಗಿ ಯುವವವಾಹಿನಿ ಕೇಂದ್ರ ಸಮಿತಿ ಕೋಶಾಧಿಕಾರಿ ಪ್ರಸಾದ್ ಎಂ.ಕೆ. ಮಾತನಾಡಿ, ಹರೀಶ್ ಪೂಂಜರು ಕಳೆದ 5 ವರ್ಷಗಳಿಂದ ಅನೇಕ ರೀತಿಯಲ್ಲಿ ಬಿಲ್ಲವ ಸಮಾಜವನ್ನು ತುಳಿದಿದ್ದಾರೆ. ಅದರ ಮುಂದುವರಿದ ಭಾಗವಾಗಿ ಪ್ರಕಾಶ್ ಕೋಟ್ಯಾನ್ ಎನ್ನುವ ನಕಲಿ ಹೆಸರಿನ ಫೇಸ್‌ಬುಕ್ ಖಾತೆಯಿಂದ ಸತ್ಯಜಿತ್ ಸುರತ್ಕಲ್‌ರನ್ನು ಕೀಳು ಮಟ್ಟದ ಶಬ್ದಗಳಿಂದ, ಏಕವಚನದಿಂದ ನಿಂದಿಸಿ ತೇಜೋವಧೆ ಮಾಡುತ್ತಿರುವುದು ಅಕ್ಷಮ್ಯ ಅಪರಾಧ. ಈ ನಕಲಿ ಖಾತೆಯ ಕವರ್ ಫೋಟೋದಲ್ಲಿ ಶಾಸಕ ಹರೀಶ್ ಪೂಂಜ ಮತ್ತು ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳರ ಭಾವಚಿತ್ರ ಇದ್ದು ಈ ಖಾತೆಯಿಂದ ಹಲವು ಬಾರಿ ನಮ್ಮ ಸಮಾಜದ ಮುಖಂಡರನ್ನು ಅವಹೇಳನ ಮಾಡಿ ಬಿಲ್ಲವ ಸಮಾಜ ಮತ್ತು ಧಮನಿತ ಸಮಾಜದ ಮಧ್ಯೆ ಗೊಂದಲವನ್ನು ಮೂಡಿಸುತ್ತಿದ್ದಾರೆ.

ಸತ್ಯಜಿತ್ ಸುರತ್ಕಲ್ ಈಗ ಸ್ವತಂತ್ರರಾಗಿದ್ದು, ಯಾವುದೇ ಪಕ್ಷದಲ್ಲಾಗಲೀ ಹಿಂದೂ ಸಂಘಟನೆಯಲ್ಲಾಗಲಿ ಜವಾಬ್ದಾರಿಯಿಲ್ಲ. ಪ್ರಸ್ತುತ ಶ್ರೀ ನಾರಾಯಣಗುರು ವಿಚಾರ ವೇದಿಕೆಯ ರಾಜಾಧ್ಯಕ್ಷರಾಗಿ ಜವಾಬ್ದಾರಿಯನ್ನು ತೆಗೆದುಕೊಂಡು ಬಿಲ್ಲವ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಾ ಇದ್ದಾರೆ ಎಂದರು.

ಶಾಸಕ ಹರೀಶ್ ಪೂಂಜರು ಬಿಲ್ಲವ ಸಮಾಜದ ಅರಣ್ಯಾಧಿಕಾರಿ ಸಂಧ್ಯಾರನ್ನು ದುರುದ್ದೇಶ ಪೂರ್ವಕವಾಗಿ ದೂರದ ಜಿಲ್ಲೆಗೆ ವರ್ಗಾವಣೆ ಮಾಡಿರುವುದು, ತಾಲ್ಲೂಕಿನಲ್ಲಿ ಹಲವು ನಿಂತು ಹೋಗಿರುವ ಕಂಬಳವನ್ನು ಆರಂಭಿಸುವ ಅವಕಾಶ ಇದ್ದರೂ ವೇಣೂರು ಪೆರ್ಮುಡ ಕಂಬಳ ಸಮಿತಿಯ ಗೌರವಾಧ್ಯಕ್ಷ ಕೆ. ವಸಂತ ಬಂಗೇರ ಹಾಗೂ ನಿತೀಶ್ ಕೋಟ್ಯಾನ್ ರವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಕಂಬಳದಲ್ಲಿ ಮೂಗು ತೂರಿಸಿ ಇನ್ನೊಂದು ಸಮಿತಿಯನ್ನು ರಚನೆ ಮಾಡಿ ಆ ಮೂಲಕ ಕಂಬಳವನ್ನು ಹೈಜಕ್ ಮಾಡುವ ವಿಫಲ ಪ್ರಯತ್ನ ಮಾಡಿರುವುದು, ನಾರಾಯಣ ಗುರುಗಳ ಟ್ಯಾಬ್ಲೊ ನಿರಾಕರಣೆ ಸಂದರ್ಭದಲ್ಲಿ ಹಾಗೂ ಪಠ್ಯ ಪುಸ್ತಕ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆಯನ್ನು ನೀಡದಿರುವುದು, ಸಮಾಜವನ್ನು ನಿಂದಿಸಿ ಕೋಟಿ-ಚೆನ್ನಯ್ಯರ ಬಗ್ಗೆ ಅವಹೇಳನ ಮಾಡಿದ ಜಗದೀಶ್ ಅಧಿಕಾರಿಯವರನ್ನು ಕಾರ್ಯಕ್ರಮದ ಅತಿಥಿಯಾಗಿ ಆಹ್ವಾನಿಸಿ ಗೌರವವನ್ನು ನೀಡಿರುವುದು, ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ನಾರಾಯಣ ಗುರುಗಳ ಅವಮಾನಿಸಿದ ಬಿಲ್ಲವ ಸಮಾಜ ವಿರೋಧದ ಮಧ್ಯೆಯೂ ರೋಹಿತ್ ಚಕ್ರತೀರ್ಥ ನನ್ನು ವೇಣೂರು ಬ್ರಹ್ಮಕಲಶಕ್ಕೆ ಆಹ್ವಾನಿಸಿರುವುದು, ಉಪ್ಪಿನಂಗಡಿ ಕೊಣಾಲು ದೈವಸ್ಥಾನದಲ್ಲಿ ಬಿಲ್ಲವರಿಗೆ ಪ್ರವೇಶವನ್ನು ನೀಡದಿದ್ದಾಗ ಶಾಸಕರಾಗಿ ಯಾವುದೇ ಸಹಕಾರ ನೀಡದಿರುವುದು, ಪಕ್ಷದ ಹೆಸರಿನಲ್ಲಿ ಬಿಲ್ಲವರನ್ನು ಎತ್ತಿಕಟ್ಟಿ ಪ್ರತ್ಯೇಕ ಸಂಘಟನೆಯನ್ನು ರಚಿಸಿ ಬಿಲ್ಲವರನ್ನೇ ವಿಂಗಡಿಸಿ ಗೊಂದಲದ ವಾತಾವರಣವನ್ನು ನಿರ್ಮಿಸುತ್ತಿರುವುದು ಎಲ್ಲರೂ ಗಮನಿಸುತ್ತಿದ್ದಾರೆ. ಶಾಸಕರು ಮತ್ತು ಅವರ ಹಿಂಬಾಲಕರು ಬಿಲ್ಲವ ಸಮಾಜವನ್ನು ತುಳಿಯುತ್ತಿರುವ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ, ಯುವಬಿಲ್ಲವ ವೇದಿಕೆ ಅಧ್ಯಕ್ಷ ನಿತೀಶ್ ಹೆಚ್, ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಅಶ್ವಥ್ ಕುಮಾರ್, ಕಾರ್ಯದರ್ಶಿ ಸುನೀಲ್ ಕನ್ಯಾಡಿ, ಸಂಘಟನಾ ಕಾರ್ಯದರ್ಶಿ ಮಾದವ ಪೂಜಾರಿ ಇದ್ದರು.

Check Also

ಬೆಳ್ತಂಗಡಿ : ಮನೆಯಂಗಳದಲ್ಲಿ ಆಟವಾಡುತ್ತಿದ್ದ 2 ವರ್ಷದ ಮಗು ಕೆರೆಗೆ ಬಿದ್ದು ಮೃತ್ಯು

ಬೆಳ್ತಂಗಡಿ: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವೊಂದು ತೋಟದ ಕೆರೆಯ ಬಳಿಗೆ ಹೋಗಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಗುರುವಾರ ಧರ್ಮಸ್ಥಳದ …

Leave a Reply

Your email address will not be published. Required fields are marked *

You cannot copy content of this page.