ಉಡುಪಿ: ಅಪರೂಪದ ನಾಥಪಂತಕ್ಕೆ ಸೇರಿದ ಕಾಲ ಭೈರವ ದೇವಾಲಯದ ಕುರುಹು ಪತ್ತೆ

ಉಡುಪಿ ಜಿಲ್ಲೆಯ ಪರ್ಕಳ ಪೇಟೆಯಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವಾಗ ಕೆರೆಯಲ್ಲಿ ತ್ರಿಶೂಲ ಲಾಂಛನದ ಅಪರೂಪದ ಕಲ್ಲೊಂದು ಪತ್ತೆಯಾಗಿದ್ದು ಇದು ನಾಥಪಂತಕ್ಕೆ ಸೇರಿದ ಕುರುಹು ಆಗಿದ್ದು ಈ ಸ್ಥಳದಲ್ಲಿ ಹಿಂದೆ ಕಾಲ ಭೈರವ ದೇವಾಲಯ ವಿರುವ ಶಂಕೆ ವ್ಯಕ್ತವಾಗಿದೆ.

ಯಾವುದೋ ಭೈರವ ದೇವಾಲಯದ ಗರ್ಭಗುಡಿಯ ತೀರ್ಥ ಹೊರಹೋಗುವುದಕ್ಕೆ ಉಪಯೋಗ ಮಾಡುವ ಗೋಮುಖ ಕಲ್ಲು ಕೂಡ ಈ ಕೆರೆಯಲ್ಲಿ ಹೂಳೆತ್ತುವಾಗ ಸಿಕ್ಕಿದ್ದು ಇದಕ್ಕೆ ಮತ್ಷ್ಟು ಪುಷ್ಟಿ ನೀಡಿದೆ. ಪುರಾತತ್ವ ಸಂಶೋಧಕರಾದ ಪ್ರೊ. ಟಿ ಮುರುಗೇಶಿ ಅವರಿಗೆ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳಬೆಟ್ಟು ಅವರು ಮಾಹಿತಿ ನೀಡಿದಾಗ ನಾಥಪಂಥಕ್ಕೆ ಸೇರಿದ ಕಾಲ ಭೈರವ ದೇವಾಲಯದ ಕುರುಹು ಇದಾಗಿದೆ  ಎಂದು ಮಾಹಿತಿ ನೀಡಿದ್ದಾರೆ. ವಿಸರ್ಜನೆಯ ದೃಷ್ಟಿಯಲ್ಲಿ ಬಿಸಾಡಿದ್ದಾರೋ ಅಥವಾ ಇನ್ನಿತರ ಕುರುಹುಗಳು ಇದೆ ಕೆರೆಯಲ್ಲಿ ಇರಬಹುದೇನೋ ಎಂಬ ಅನುಮಾನಗಳು ಕಾಡುತ್ತಿದ್ದು ಪೂರ್ಣ ಪ್ರಮಾಣದಲ್ಲಿ ಕೆರೆಯ ಮಣ್ಣು ಮೇಲೆತ್ತಿದ್ದಾಗ ಇದು ಸ್ಪಷ್ಟವಾಗಬಹುದೆಂದು ಹೇಳಲಾಗಿದೆ. ಕೆರೆಯ ಅಂಚಿನಲ್ಲಿ ನಾಲ್ಕು ಕಲ್ಲುಗಳಿದ್ದು ಒಂದು ಶಿಲೆ ಕಲ್ಲು ಕೂಡ ಇದೆ. ಅದೊಂದು ಯಾವುದು ಕೆರೆಯ ದಡದಲ್ಲಿ ದೈವ ಇರುವಂತಹ ಕುರುಹು ಇರುವುದು ಕಂಡು ಬಂದಿದೆ.

ಉಡುಪಿ ನಗರಸಭೆ ಹಾಗೂ ಉಡುಪಿ ನಗರ ಪ್ರಾಧಿಕಾರದ ವತಿಯಿಂದ ಇಲ್ಲಿ ಕೆರೆಯ ಅಭಿವೃದ್ದಿ ಕಾರ್ಯ ನಡೆಯುತ್ತಿದ್ದು ಕೆರೆಯಲ್ಲಿ ಸ್ವಲ್ಪ ಭಾಗದ ಮಣ್ಣನ್ನು ಮಾತ್ರ ಮೇಲೆತ್ತಲಾಗಿದೆ. ಕೆರೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಉಕ್ಕಿ ಹರಿಯುತ್ತಿದ್ದು  ನೀರನ್ನು ಹೊರ ಹಾಕಲು 25 ಎಚ್ ಪಿ ಪಂಪ್ ಬಳಸಲಾಗುತ್ತಿದೆ. ಇವಿಗಳ ಮಧ್ಯೆ ದೇವಾಲಯದ ಕುರುಹು ಸಿಕ್ಕಿರುವುದು ಸ್ಥಳೀಯರಲ್ಲಿ ಕುತೂಹಲ ಹೆಚ್ಚಿದೆ. ಏಳೆಂಟು ವರ್ಷದ ಹಿಂದೆ ಪರ್ಕಳ ನಗರಸಭಾ ಸದಸ್ಯ ದಿವಂಗತ ರಾಮದಾಸ್ ನಾಯಕ್ ಅವರು ಕೆಳಪರ್ಕದ ಶ್ರೀ ಗೋಪಾಲಕೃಷ್ಣ ದೇವಸ್ಥಾನವನ್ನು ಅಭಿವೃದ್ಧಿಪಡಿಸುತ್ತಿರುವಾಗ ಅಲ್ಲಿ ನಡೆಸಿದ ಆರೂಢ ಪ್ರಶ್ನೆಯಲ್ಲಿ ಕಂಡು ಬಂತಂತೆ ಇದೇ ಕೆರೆಯಲ್ಲಿ ಹುಡುಕಾಟ ನಡೆಸಿದರು ಯಾವುದೇ ಕುರುಹು ಸಿಕ್ಕಿರುವುದಿಲ್ಲ ಇದೀಗ ಉಡುಪಿ ನಗರ ಪ್ರಾಧಿಕಾರದ ವತಿಯಿಂದ ಕೆರೆ ಅಭಿವೃದ್ಧಿ ಮಾಡುತ್ತಿರುವಾಗ ಈ ರೀತಿ ವಿಗ್ರಹ ಮತ್ತು ಗೋಮುಖ ಕಲ್ಲು ಸಿಕ್ಕಿರುವುದು ಸ್ಥಳ ಪುರಾಣವನ್ನು ಮೆಲುಕು ಹಾಕುವ ಕಾಲ ಕೂಡಿಬಂದಿದೆ.

ನಾಥ ಪಂಥ ವಿಶೇಷ:

ಭಾರತದ ಪ್ರಾಚೀನ ಪಂಥಗಳಲ್ಲಿ ಒಂದಾಗಿರುವ ನಾಥವು, ನೇಪಾಳ ಟಿಬೆಟ್ ಆಫಘಾನಿಸ್ತಾನ, ಪಾಕಿಸ್ತಾನ ಒಳಗೊಂಡಂತೆ ದಕ್ಷಿಣ ಏಶಿಯಾದ ತುಂಬ ಹರಡಿತ್ತು.ಭಾರತದ ಒಂದು ಪ್ರಸಿದ್ಧ ಯೋಗಪಂಥಗಳಲ್ಲಿ ನಾಥ ಪಂಥ ಅತೀ ಶ್ರೇಷ್ಟವಾದುದು. ಗೋರಖ್​ನಾಥ ಈ ವಿಶಿಷ್ಟ ಪಂಥದ ಪ್ರವರ್ತಕ. ಆತನ ಗುರು ಹಾಗೂ ಆದಿನಾಥನ ಶಿಷ್ಯ ಮತ್ಸ್ಯೇಂದ್ರನಾಥ ಇದರ ಸ್ಥಾಪಕ ಎನ್ನಲಾಗಿದೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿಗಳೆಂಬ ಅಷ್ಟಾಂಗಗಳಿಂದ ಕೂಡಿದ ಈ ಯೋಗಪಂಥಕ್ಕೆ ಬಹಳ ಪ್ರಾಚೀನ ಇತಿಹಾಸವಿದೆ. ಮಾನವ ದೇಹದಲ್ಲಿ ಸುಪ್ತವಾಗಿರುವ ಕುಂಡಲಿನೀ ಶಕ್ತಿಯನ್ನು ಚಾಲನಗೊಳಿಸಿ ಎಂಟು ಚಕ್ರಗಳ ಮೂಲಕ ಒಯ್ದು, ಒಂಭತ್ತನೆಯ ಸಹಸ್ರಾರಚಕ್ರದಲ್ಲಿ ನಿಲ್ಲಿಸಿದಾಗ ಸಮಾಧಿಸ್ಥಿತಿಯುಂಟಾಗಿ ಪರಮಾರ್ಥದರ್ಶನವಾಗುತ್ತದೆ. ಈ ದರ್ಶನ ಪಡೆದಂಥ ವ್ಯಕ್ತಿ ಆನಂದಪೂರ್ಣನಾಗುತ್ತಾನೆ. ಲೋಕದ ಎಲ್ಲ ಬಂಧಕಸಾಮಗ್ರಿಯನ್ನು ಕೊಡವಿ ಹಾಕುವುದರಿಂದ ಅವಧೂತ ಎನಿಸುತ್ತಾನೆ. ಸಮಾಧಿಯ ತಿರುಳು ಸಮರಸಕರಣ. ಅಂದರೆ, ತಾನು, ಪರಮೇಶ್ವರ ಪ್ರಪಂಚ ಇತ್ಯಾದಿ ಭೇದಗಳಿಲ್ಲದೆ ಸರ್ವವೂ ಶಿವಮಯವಾಗುವುದು ಎಂದರ್ಥ. ಈ ವೈವಿಧ್ಯಮಯ ಪ್ರಪಂಚ ಶಕ್ತಿಯ ವಿಲಸಿತ. ಈ ಶಕ್ತಿಯಾದರೋ ಶಿವನಿಂದ ಬೇರೆಯಾದುದಲ್ಲ. ಸೃಷ್ಟಿಯಾಗಬೇಕಾದರೆ ಮೂಲಭೂತನಾದ ಶಿವನ ಶಕ್ತಿಯ ಮೂಲಕವೇ ಆಗಬೇಕು. ಶಿವಶಕ್ತಿಯರ ಪರಮಾರ್ಥ ಐಕ್ಯವನ್ನು ಅನುಭವಿಸುವಂಥ ನಾಥ-ಅವಸ್ಥೆಯಲ್ಲಿರುವುದೇ ಯೋಗದ ಗುರಿ. ಈ ಸ್ಥಿತಿಯನ್ನು ಪಡೆಯಲು ಕುಂಡಲಿನೀಚಾಲನ ಪ್ರಧಾನ ಸಹಾಯಕವಾದುದರಿಂದ ಅದನ್ನು ಪ್ರಚೋದಿಸುವ ಆಸನ, ಪ್ರಾಣಾಯಾಮಾದಿಗಳಿಗೆ ಈ ಪಂಥ ಆದ್ಯ ಗಮನ ನೀಡುತ್ತದೆ. ಈ ರೀತಿ ಹಠಯೋಗದ ಮೇಲೆ ಆಸ್ಥೆಯನ್ನು ಹೊಂದಿ ತಾಂತ್ರಿಕ ಪ್ರಕ್ರಿಯೆಗಳನ್ನು ಹೊಂದಿಸಿಕೊಂಡ ಈ ಮಾರ್ಗದ ಅನುಯಾಯಿಗಳು ಅವರದೇ ಆದ ಲಾಂಛನವನ್ನು ರೂಪಿಸಿಕೊಂಡಿದ್ದಾರೆ. ಭಸ್ಮಧಾರಣ, ಉಣ್ಣೆಯ ಜನಿವಾರ, ನಾದ (ಕೊಂಬು), ಮುದ್ರಾ (ಕಿವಿಯುಂಗರ) – ಇವು ಈ ಸಿದ್ಧಯೋಗಿಗಳನ್ನು ಇತರರಿಂದ ಬೇರ್ಪಡಿಸುತ್ತವೆ. ದೀಕ್ಷೆ ಪಡೆದ ಯೋಗಿಗಳ ಹೆಸರು ನಾಥ ಎಂಬುದರಲ್ಲಿ ಕೊನೆಯಾಗುತ್ತದೆ. ಮೂವತ್ತೆರಡು ಲಕ್ಷಣಗಳುಳ್ಳ ಶಿಷ್ಯ ಮೂವತ್ತಾರು ಲಕ್ಷಣಗಳುಳ್ಳ ಗುರುವಿನಲ್ಲಿ ದೀಕ್ಷೆ ಪಡೆಯುತ್ತಾನೆ. ಜ್ಞಾನ, ವಿವೇಕ, ನಿರಾಲಂಬ, ಸಂತೋಷ, ಶೀಲ, ಸಹಜ ಮತ್ತು ಶೂನ್ಯ – ಈ ಎಂಟು ಗುಣಗಳಲ್ಲಿ ನಾಲ್ಕು ನಾಲ್ಕು ವಿಭಾಗ ಮಾಡಿ ಮೂವತ್ತೆರಡು ಲಕ್ಷಣಗಳನ್ನು ಹೇಳಿದ್ದಾರೆ. ಒಬ್ಬ ಗುರು ಅನೇಕರಿಗೆ ದೀಕ್ಷೆ ಕೊಡುವುದನ್ನು ನಿಷೇಧಿಸಲಾಗಿದೆ. ಉತ್ತರ ಭಾರತದ ಬಹು ಕಡೆ ಕಾಣ ಸಿಗುವ ಈ ಪಂಥ ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಮಾತ್ರ ಇದೆ.  ಕಳೆದ 10 ಶತಮಾನಗಳಿಂದ. ನಾಡಿನಾದ್ಯಂತ ಇರುವ ಮಠಗಳು, ಜೋಗಿ-ಸಿದ್ಧ-ಭೈರವ ಹೆಸರಿನಲ್ಲಿರುವ ಊರು, ಗವಿ, ಬೆಟ್ಟ, ಕೊಳ್ಳ, ಕಣಿವೆ, ಗುಡಿ, ಸಮಾಧಿ,, ಶಿಲ್ಪ ಹಾಗೂ ಶಾಸನಗಳು, ಅದರ ಅಸ್ತಿತ್ವದ ಕುರುಹುಗಳು ನಾಡಿನ ಅಲ್ಲಲ್ಲಿ ಕಾಣ ಸಿಗುತ್ತವೆ.

Check Also

ಕೇರಳದಲ್ಲಿ ‘ವೆಸ್ಟ್‌ ನೈಲ್’ ಜ್ವರದ ಆತಂಕ- ದ.ಕ. ಜಿಲ್ಲೆಯಲ್ಲೂ ವಿಶೇಷ ನಿಗಾ

ಮಂಗಳೂರು: ನೆರೆಯ ಕೇರಳದ ಮಲಪ್ಪುರಂ, ಕೋಯಿಕ್ಕೋಡ್, ತೃಶೂರ್ ಪ್ರದೇಶದಲ್ಲಿ ‘ವೆಸ್ಟ್ ನೈಲ್’ ಜ್ವರ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ …

Leave a Reply

Your email address will not be published. Required fields are marked *

You cannot copy content of this page.