![](https://thrishulnews.com/wp-content/uploads/2024/03/WhatsApp-Image-2024-03-12-at-11.54.26-AM.jpeg)
ಬೆಂಗಳೂರು, ಎ. 19: ಶಿಕ್ಷಣ ಇಲಾಖೆಯು ರಾಜ್ಯದಲ್ಲಿ 1316 ಅನಧಿಕೃತ ಶಾಲೆಗಳನ್ನು ಗುರುತಿಸಿದ್ದು, ಇನ್ನಷ್ಟು ಶಾಲೆಗಳ ತಪಾಸಣೆ ಕಾರ್ಯ ಮುಂದುವರಿದಿದೆ. ಈ ಬಗ್ಗೆ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿ ಮೇ 25 ರೊಳಗೆ ಶಾಲೆಗಳನ್ನು ಮುಚ್ಚಲು ಸೂಚಿಸಿದ್ದು, ಅನಧಿಕೃತ ಶಾಲೆಗಳ ಆಡಳಿತ ಮಂಡಳಿಗೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
`ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಶಾಲೆಗಳ ಪಟ್ಟಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಬೇಕು, ದೂರುಗಳು ಬಂದರೂ, ಕ್ರಮ ಕೈಗೊಳ್ಳದೆ ಸಮಯ ವ್ಯರ್ಥ ಮಾಡಬಾರದು. ಪಟ್ಟಿಯನ್ನು ಒದಗಿಸಿದರೆ ಪೋಷಕರಿಗೂ ಅನುಕೂಲವಾಗುತ್ತದೆ. ಮಕ್ಕಳನ್ನು ಶಾಲೆಗೆ ಸೇರಿಸುವ ಮೊದಲು ಪೋಷಕರು ಶಾಲಾ ಪೂರ್ವಾಪರ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಮನ್ವಯ ಸಮಿತಿ (ಕೆಪಿಎಂಟಿಸಿಸಿ) ಶಿಕ್ಷಣ ಇಲಾಖೆಯನ್ನು ಆಗ್ರಹಿಸಿತ್ತು.
ಈ ಎಲ್ಲ ಬೆಳವಣಿಗಳ ಮಧ್ಯೆ ಶಿಕ್ಷಣ ಇಲಾಖೆ1316 ಅನಧಿಕೃತ ಶಾಲೆಗಳನ್ನು ಗುರುತಿಸಿದೆ. ಇನ್ನಷ್ಟು ಶಾಲೆಗಳ ತಪಾಸಣಾ ಕಾರ್ಯ ಮುಂದುವರಿದ್ದು, ಶಿಕ್ಷಣ ಇಲಾSಯ ಆಯುಕ್ತರು ಸುತ್ತೋಲೆ ಹೊರಡಿಸಿ, ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಅನಧಿಕೃತ ಶಾಲೆಗಳು 2023-24ರ ಶೈಕ್ಷಣಿಕ ವರ್ಷಕ್ಕೆ ಮಕ್ಕಳನ್ನು ದಾಖಲು ಮಾಡಿಕೊಳ್ಳಬಾರದು. ನೋಂದಣಿ ಮಾಡಿಕೊಂಡ ಶಾಲೆಗಳು ಯಾವ ಪಠ್ಯಕ್ರಮದ ಬೋಧನೆಗೆ ಅನುಮತಿ ಪಡೆಯಲಾಗಿದೆಯೋ ಅದೇ ಪಠ್ಯಕ್ರಮ ಬೋಧನೆ ಮಾಡಬೇಕು. ಅನುಮತಿ ಪಡೆದಷ್ಟೇ ಮಾಧ್ಯಮ, ವಿಭಾಗಗಳನ್ನು ನಡೆಸಬೇಕು. ಇಲಾಖೆ ಪೂರ್ವಾನುಮತಿ ಇಲ್ಲದೇ ಶಾಲೆಗಳನ್ನು ಸ್ಥಳಾಂತರ ಮಾಡಬಾರದು. ಕರ್ನಾಟಕ ಪಠ್ಯಪುಸ್ತಕ ಸಂಘ ಸರಬರಾಜು ಮಾಡುವ ಪಠ್ಯಪುಸ್ತಕಗಳನ್ನೇ ಖರೀದಿ ಮಾಡಬೇಕು. ಮೇ ೨೫ರ ನಂತರ ರಾಜ್ಯದಲ್ಲಿ ಅನಧಿಕೃತ ಶಾಲೆಗಳು ಪತ್ತೆಯಾದರೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆ ಎಚ್ಚರಿಸಿದೆ.