March 4, 2026
rr

ಬೆಂಗಳೂರು, ಮೇ 03: ಕರ್ನಾಟಕ ಸಾರ್ವತ್ರಿಕ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈಗಾಗಲೇ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮತ್ತು ಆಡಳಿತಾರೂಢ ಬಿಜೆಪಿ ಪಕ್ಷಗಳು ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿವೆ. ಆದರೆ ಆ ಪ್ರಣಾಳಿಕೆಗಳಲ್ಲಿ ಮಕ್ಕಳ ಅಭಿವೃದ್ಧಿ-ರಕ್ಷಣೆಗೆ ಎಷ್ಟು ಆದ್ಯತೆ ಸಿಕ್ಕಿದೆಯೇ? ಎಂಬ ಪ್ರಶ್ನೆ ಹುಟ್ಟಿದೆ.

ಕರ್ನಾಟಕದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪ್ರಣಾಳಿಕೆಯಲ್ಲಿನ ಎಲ್ಲ ಅಂಶಗಳನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಎಲ್ಲ ಪಕ್ಷಗಳು ಹೇಳಿಕೊಂಡಿವೆ. ಅಧಿಕಾರ ಪಡೆಯುವ ಸಂಬಂಧ ಮಹಿಳೆಯರ ಮತಗಳ ಮೇಲೆ ಎಲ್ಲ ಪಕ್ಷಗಳು ಕಣ್ಣಿಟ್ಟಿವೆ. ಅದಕ್ಕಾಗಿಯೇ ಗ್ಯಾಸ್ ಸಿಲಿಂಡರ್ ಉಚಿತ ಘೋಷಣೆ ಮಾಡಿವೆ. ಮೂಲಸೌಕರ್ಯ, ಮಾಸಿಕ ಪಿಂಚಣೆ, ಸಹಾಯಧನ, ಉಚಿತ ಅಕ್ಕಿ ಸೇರಿ ಹಲವು ಅಂಶಗಳು ಮೇಲೆ ಎಲ್ಲ ಪಕ್ಷಗಳು ಬೆಳಕು ಚೆಲ್ಲಿವೆ.

ಆದರೆ ಒಂದೆರಡು ಅಂಶ ಹೊರತಾಗಿ ‘ಮಕ್ಕಳ ರಕ್ಷಣೆ’ ಕುರಿತು ಯಾವೊಂದು ಪಕ್ಷಗಳು ಏನನ್ನೂ ಘೋಷಣೆ ಮಾಡಿಲ್ಲ. ಆ ಬಗ್ಗೆ ಯೋಚನೆ ಸಹ ಮಾಡದಿರುವುದು ಆಘಾತಕಾರಿ ವಿಷಯ. ಹೀಗೆಂದು ರಾಜ್ಯಾದ್ಯಂತ ಜಾಲ ಹೊಂದಿರುವ ‘ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ’ವು (KCRO) ಕಳವಳ ವ್ಯಕ್ತಪಡಿಸಿದೆ.


ಮಕ್ಕಳ ಈ ಸಮಸ್ಯೆಗಳಿಗೆ ಬಗ್ಗೆ ಎಲ್ಲ ಪಕ್ಷಗಳ ನಿರ್ಲಕ್ಷ್ಯ ಈ ಕುರಿತು ಪ್ರಕಟಣೆ ಹೊರಡಿಸಿರುವ ‘ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ’ (KCRO) ರಾಜ್ಯ ಸಂಚಾಲಕ ಡಾ.ವಾಸುದೇವ ಶರ್ಮಾ ಎನ್.ವಿ. ಅವರು, ಮಕ್ಕಳ ರಕ್ಷಣೆಯ ವಿಚಾರವನ್ನು ಯಾವ ಪಕ್ಷಗಳೂ ಮುಟ್ಟದಿರುವುದು ಆಘಾತಕಾರಿ ಸಂಗತಿ. ”ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ದೈಹಿಕ, ಮಾನಸಿಕ ಅಥವಾ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಯಾವುದೇ ಉಲ್ಲೇಖವಿಲ್ಲ’ ವಲಸೆ ಮಕ್ಕಳು, ಮಕ್ಕಳ ನಿಲಯಗಳಲ್ಲಿ ಅಥವಾ ವಿವಿಧ ಸನ್ನಿವೇಶಗಳಿಂದ ಸಂಕಷ್ಟದಲ್ಲಿರುವ ಮಕ್ಕಳ ಸ್ಥಿತಿಗತಿಯ ಬಗ್ಗೆ ಯಾವುದೇ ಉಲ್ಲೇಖ ಮಾಡಲಾಗಿಲ್ಲ ಎಂದು ತಿಳಿಸಿದರು.

ಪ್ರಸ್ತುತ ಕೇಂದ್ರ ಸರ್ಕಾರವು ಸ್ವಯಂ ಸೇವಾ ಸಂಘಟನೆಗಳಿಂದ ಚೈಲ್ಡ್‌ಲೈನ್ 1098 ಕಾರ್ಯಾಚರಣೆಗಳನ್ನು ಹಿಂಪಡೆಯಲು ನಿರ್ಧರಿಸಿದೆ. ಅದನ್ನು ರಾಜ್ಯ ಸರ್ಕಾರಗಳು ಪೊಲೀಸರೊಂದಿಗೆ 112 ಸಹಾಯವಾಣಿ ಮೂಲಕ ನಿರ್ವಹಿಸುವಂತೆ ಮಾಡಿದೆ. ಹಲವಾರು ಸರ್ಕಾರೇತರ ಸಂಸ್ಥೆಗಳು (NGO) ಮತ್ತು ಮಕ್ಕಳ ಗುಂಪುಗಳು ಈ ವಿಷಯವನ್ನು ಪರಿಶೀಲಿಸುವಂತೆ ಸರ್ಕಾರ ಹಾಗೂ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದ್ದರೂ ಆ ಬಗ್ಗೆ ನಿರ್ಲಕ್ಷಿಸಲಾಗಿದೆ ಎಂದು ಅವರು ದೂರಿದರು.

ಮಕ್ಕಳ ರಕ್ಷಣೆಯ ಬೇಡಿಕೆಗಳು ಏನು?

ಮಕ್ಕಳ ಜೊತೆಗೆ ಕೆಲಸ ಮಾಡುವ ಗುಂಪುಗಳ ದೊಡ್ಡ ಬೇಡಿಕೆಯೆಂದರೆ ಮಕ್ಕಳ ಪಾಲನಾ ಸಂಸ್ಥೆಗಳು, ಮಕ್ಕಳ ಕಲ್ಯಾಣ ಸಮಿತಿಗಳು (CWC), ಮಕ್ಕಳ ನ್ಯಾಯ ಮಂಡಳಿಗಳು (JJB), ಮಕ್ಕಳ ನ್ಯಾಯಾಲಯಗಳು ಮತ್ತು POCSO ನ್ಯಾಯಾಲಯಗಳು ಮತ್ತು ಮಕ್ಕಳ ವಿಶೇಷ ಪೊಲೀಸ್ ಘಟಕಗಳನ್ನು ಒಳಗೊಂಡಿರುವ ಮಕ್ಕಳ ಪಾಲನಾ ವ್ಯವಸ್ಥೆಗಳನ್ನು ನಡೆಸಲು ಸಾಕಷ್ಟು ಹಣವನ್ನು ಒದಗಿಸಬೇಕು ಎಂಬುದಾಗಿದೆ.

ಆದರೆ ರಾಜಕೀಯ ಪಕ್ಷಗಳು ಇವುಗಳ ಬಗ್ಗೆ ನಿರಾಸಕ್ತಿ ತೋರಿಸಿವೆ. ಈ ರಾಜಕೀಯ ಪಕ್ಷಗಳ ಸಲಹೆಗಾರರು ಮಕ್ಕಳ ಮೇಲಿನ ಅಪರಾಧಗಳ ಪ್ರಮಾಣ ಹೆಚ್ಚುತ್ತಿರುವ ಕುರಿತು ರಾಷ್ಟ್ರೀಯ ಅಪರಾಧ ಪ್ರಕರಣಗಳ ದಾಖಲೆ ವರದಿಯನ್ನು (NCRB) ಯಾರೂ ಗಮನಿಸಿಲ್ಲ ಎಂದರು.

ಭಾರತ ಸರ್ಕಾರವು ಸಹಿ ಮಾಡಿರುವ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ಮಕ್ಕಳಿಗೆ ಬದುಕುವ, ರಕ್ಷಣೆ ಹೊಂದುವ, ಅಭಿವೃದ್ಧಿ ಮತ್ತು ಭಾಗವಹಿಸುವಿಕೆಯ ಹಕ್ಕುಗಳನ್ನು ಖಾತರಿಪಡಿಸಬೇಕು. ಸರ್ಕಾರವು 2013 ರಲ್ಲಿ ರಾಷ್ಟ್ರೀಯ ಮಕ್ಕಳ ನೀತಿ ಅಂಗೀಕರಿಸಿತು. ರಾಜಕೀಯ ಪಕ್ಷಗಳು ರಕ್ಷಣೆಯ ವಿಷಯದ ಬಗ್ಗೆಯೇ ಗಮನ ಹರಿಸದಿರುವಾಗ, ಅವರು ಮಕ್ಕಳ ಭಾಗವಹಿಸುವಿಕೆಯ ಹಕ್ಕುಗಳನ್ನು ಮಾನ್ಯ ಮಾಡುತ್ತಾರೆ ಎಂದು ನಾವು ಹೇಗೆ ನಿರೀಕ್ಷಿಸಬಹುದಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಮಕ್ಕಳ ರಕ್ಷಣೆ ಕುರಿತು ಪ್ರಣಾಳಿಕೆಗಳು ಮೌನವಾಗಿರುವುದನ್ನು ನೋಡಿದರೆ ಈ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದ ಮೇಲೆ ʻಮಕ್ಕಳ ಮತ್ತು ಮಕ್ಕಳ ರಕ್ಷಣೆ ವಿಚಾರಗಳ ಬಗ್ಗೆ ಪ್ರಶ್ನೆ ಮಾಡಬೇಡಿ ಎಂದು ಸೂಚಿಸುತ್ತಿರುವಂತೆ ಕಾಣುತ್ತದೆ ಎಂದು ಅವರು ವ್ಯಂಗ್ಯವಾಡಿದರು.

ಚುನಾವಣಾ ಪ್ರಕ್ರಿಯೆಗಳು ಪ್ರಾರಂಭವಾಗುವ ಮೊದಲು ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಮತ್ತು ಇತರ ಹಲವಾರು ಗುಂಪುಗಳು ಮಂಡಿಸಿದ ಮಕ್ಕಳ ಬೇಡಿಕೆಗಳನ್ನು ರಾಜಕೀಯ ಪಕ್ಷಗಳು ಅಳವಡಿಸಿಕೊಳ್ಳಬೇಕು. ಮಕ್ಕಳ ಶಿಕ್ಷಣ ಮತ್ತು ಮಕ್ಕಳ ಆರೋಗ್ಯ ಸಮಸ್ಯೆಗಳ ಕಡೆಗೆ ಗಮನ ಹರಿಸಬೇಕು. ಮಕ್ಕಳ ಪರ ಘೋಷಿಸಿದ ಕೆಲವೇ ಕೆಲವು ಅಂಶಗಳು ಇಲ್ಲಿವೆ ಎಎಪಿ ಒಂದು ಸಾಲಿನಲ್ಲಿ ತನ್ನ ದೆಹಲಿ ಮಾದರಿಯಲ್ಲಿ ಶಾಲೆಗಳನ್ನು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದೆ. ಕಾಂಗ್ರೆಸ್ (ಐ) ಶಾಲೆಗಳಿಗೆ ಖಾಯಂ ಸಿಬ್ಬಂದಿಯನ್ನು ಒದಗಿಸುವುದಾಗಿ ಮತ್ತು ಅಂಗವಿಕಲತೆಯಿರುವ ಮಕ್ಕಳಿಗೆ ಶಿಕ್ಷಣ ಸೌಲಭ್ಯಗಳನ್ನು ಸ್ಥಾಪಿಸುವುದಾಗಿ ಭರವಸೆ ನೀಡಿದೆ. ಜೆಡಿಎಸ್ ಪ್ರತಿ ಪಂಚಾಯಿತಿಗೆ ಹೈಟೆಕ್ ಶಾಲೆಗಳ ಭರವಸೆ ನೀಡಿದೆ. ಬಿಜೆಪಿ ಎನ್‌ಇಪಿಯನ್ನೇ ಅನುಸರಿಸುತ್ತದೆ. ಆದರೆ ಕಾಂಗ್ರೆಸ್ ಎನ್‌ಇಪಿ ಹಿಂತೆಗೆದುಕೊಳ್ಳಲು ಮತ್ತು ರಾಜ್ಯ ಆಧಾರಿತ ಶಿಕ್ಷಣ ನೀತಿಯನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

– oneindia

About The Author

Leave a Reply

Your email address will not be published. Required fields are marked *

You cannot copy content of this page.