
ಶಿವಮೊಗ್ಗ: ಮಲೆನಾಡಿನ ಜನರ ಬಹುದಿನಗಳ ಕನಸಾಗಿದ್ದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆ ಸಂಭವಿಸಿದೆ. ಕೇವಲ ಮೂರು ವರ್ಷಗಳಿಗೂ ಮುನ್ನವೇ ಇಂಡಿಗೋ ಏರ್ಲೈನ್ಸ್ ತನ್ನ ಹಾರಾಟ ಸೇವೆಯನ್ನು ಸ್ಥಗಿತಗೊಳಿಸಿರುವುದು ಪ್ರಯಾಣಿಕರು ಮತ್ತು ಕೈಗಾರಿಕೋದ್ಯಮಿಗಳಲ್ಲಿ ಆತಂಕ ಮೂಡಿಸಿದೆ.
2023ರ ಆಗಸ್ಟ್ 31ರಂದು ಅದ್ಧೂರಿಯಾಗಿ ಆರಂಭಗೊಂಡಿದ್ದ ಇಂಡಿಗೋ ವಿಮಾನ ಸೇವೆ ಈಗ ಅಧಿಕೃತವಾಗಿ ನಿಂತಿದ್ದು, ಮೇ 1ರಿಂದ ಬೆಂಗಳೂರು–ಶಿವಮೊಗ್ಗ ಮಾರ್ಗದಲ್ಲಿ ಯಾವುದೇ ಟಿಕೆಟ್ ಬುಕಿಂಗ್ ಲಭ್ಯವಿಲ್ಲ ಎಂದು ಕಂಪನಿಯ ವೆಬ್ಸೈಟ್ನಲ್ಲಿ ಕಾಣಿಸಿದೆ. ಏಪ್ರಿಲ್ 30ರಂದು ಮಧ್ಯಾಹ್ನ 2:30ಕ್ಕೆ ಹೊರಟ 6E7732 ವಿಮಾನವೇ ಈ ಮಾರ್ಗದ ಕೊನೆಯ ಹಾರಾಟವಾಗಿದೆ.
ವಿಮಾನ ನಿಲ್ದಾಣ ಆರಂಭವಾದ ನಂತರ ಇದುವರೆಗೆ ಸುಮಾರು 2,400ಕ್ಕೂ ಹೆಚ್ಚು ವಿಮಾನಗಳು ಸಂಚರಿಸಿದ್ದು, ಒಂದು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಇದರ ಸೇವೆಯನ್ನು ಬಳಸಿಕೊಂಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆಯ ಕೊರತೆ ಮತ್ತು ಪದೇ ಪದೇ ವಿಮಾನ ರದ್ದಾಗುತ್ತಿರುವ ಸಮಸ್ಯೆಗಳು ಸೇವೆಗೆ ಅಡ್ಡಿಯಾಗಿದ್ದವು.
ಈ ಸೇವೆ ಸ್ಥಗಿತಕ್ಕೆ ಪ್ರಮುಖ ಕಾರಣವಾಗಿ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಮತ್ತು ಇಂಡಿಗೋ ನಡುವಿನ ಒಪ್ಪಂದ 2025ರ ಆಗಸ್ಟ್ನಲ್ಲಿ ಮುಕ್ತಾಯವಾಗುತ್ತಿರುವುದು ಹಾಗೂ ಪ್ರತಿ ಟಿಕೆಟ್ಗೆ ನೀಡಲಾಗುತ್ತಿದ್ದ ರೂ. 500 VGF (Viability Gap Funding) ಸಹಾಯಧನ ಜುಲೈ 2025ಕ್ಕೆ ಅಂತ್ಯವಾಗುತ್ತಿರುವುದು ಹೇಳಲಾಗುತ್ತಿದೆ. ಒಪ್ಪಂದ ನವೀಕರಣ ಪ್ರಕ್ರಿಯೆಯ ವಿಳಂಬವೂ ಈ ನಿರ್ಧಾರಕ್ಕೆ ಕಾರಣವಾಗಿದೆ.
ಈ ಬೆಳವಣಿಗೆ ಮಲೆನಾಡಿನ ಕೈಗಾರಿಕೋದ್ಯಮಿಗಳಿಗೆ ದೊಡ್ಡ ಹಿನ್ನಡೆಯಾಗಿದ್ದು, ವ್ಯಾಪಾರ ಮತ್ತು ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಇದರ ಮಧ್ಯೆ, ಸಂಸದ ಬಿ.ವೈ. ರಾಘವೇಂದ್ರ ಅವರು ಶಿವಮೊಗ್ಗ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ವಿಮಾನ ನಿಲ್ದಾಣವನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಹಸ್ತಾಂತರಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಒಟ್ಟಿನಲ್ಲಿ, ಮಲೆನಾಡಿನ ಸಂಪರ್ಕಕ್ಕೆ ಭರವಸೆ ನೀಡಿದ್ದ ವಿಮಾನ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವುದು ಸ್ಥಳೀಯ ಜನರಲ್ಲಿ ನಿರಾಶೆ ಮೂಡಿಸಿದೆ.
