
ಕಾರವಾರ: ಶಿರಸಿ-ಸಿದ್ದಾಪುರ ಮುಖ್ಯರಸ್ತೆಯ ಕನ್ನಳ್ಳಿ ಚೆಕ್ಪೋಸ್ಟ್ ಬಳಿ ಜನಗಣತಿ ಕಾರ್ಯದ ಮಾಹಿತಿ ನೀಡಲು ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಶಿಕ್ಷಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಮೃತಪಟ್ಟ ಶಿಕ್ಷಕಿಯನ್ನು ಬಸವಗಿರಿ, ಕೊಲಸಿರ್ಸಿ ಕ್ರಾಸ್ ನಿವಾಸಿ ಪೂರ್ಣಿಮಾ ಗಣಪತಿ ಭಟ್ (47) ಎಂದು ಗುರುತಿಸಲಾಗಿದೆ. ಇವರು ಸಿದ್ದಾಪುರ ಪಟ್ಟಣದ ಹೊಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ-ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ವೃತ್ತಿಪರತೆಗೆ ಹೆಸರಾಗಿದ್ದ ಇವರು, ಪ್ರಸ್ತುತ ಜನಗಣತಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು.
ಶಿರಸಿ ಕಡೆಯಿಂದ ಸಿದ್ದಾಪುರದತ್ತ ಕಟ್ಟಿಗೆ ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್, ಪೂರ್ಣಿಮಾ ಅವರು ಚಲಾಯಿಸುತ್ತಿದ್ದ ಸ್ಕೂಟರ್ಗೆ ಡಿಕ್ಕಿಯಾಗಿದೆ. ಟ್ರ್ಯಾಕ್ಟರ್ ಅನ್ನು ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿದ್ದೇ ಈ ಅಪಘಾತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಶಿಕ್ಷಕಿ ದುರದೃಷ್ಟವಶಾತ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಅಜಾಗರೂಕತೆಯಿಂದ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣನಾದ ಹಾವೇರಿ ಮೂಲದ ಟ್ರ್ಯಾಕ್ಟರ್ ಚಾಲಕ ಆಕಾಶ ಮಂಜಪ್ಪ ಬಾಲಣ್ಣನವರ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.
