ಪುತ್ತಿಲ ಪರಿವಾರ ಬಿಜೆಪಿ ಜತೆ ವಿಲೀನ- ಚೌಟರಿಗೆ ಮತ್ತಷ್ಟು ಬಲ

ಪುತ್ತೂರು: ಹಿಂದೂ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಅವರ ಪಕ್ಷ ಸೇರ್ಪಡೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನಿವಾಸದಲ್ಲಿ ಗುರುವಾರ ರಾತ್ರಿ ನಡೆದ ಸಭೆಯಲ್ಲಿ ಹಸುರು ನಿಶಾನೆ ಸಿಕ್ಕಿದೆ.

ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ನೀಡಿ ಪ್ರಮುಖ ನಾಯಕರೊಂದಿಗೆ ಪುತ್ತಿಲ ಸಮಾಲೋಚಿಸಿದರು.

ಬಳಿಕ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನಿವಾಸಕ್ಕೆ ಆಗಮಿಸಿದ ಪುತ್ತಿಲರನ್ನು ಆತ್ಮೀಯವಾಗಿ ಬರಮಾಡಿಕೊಂಡ ವಿಜಯೇಂದ್ರ ಕೆಲ ಹೊತ್ತು ಚರ್ಚೆ ನಡೆಸಿದರು. ಬಳಿಕ ಕೈಗೊಂಡ ತೀರ್ಮಾನದಂತೆ ಪುತ್ತಿಲ ಅವರು ಮಂಗಳೂರು ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಪುತ್ತಿಲ ಅವರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.

ಪುತ್ತೂರು ಭಾಗದಲ್ಲಿ ಪ್ರಭಾವಿ ನಾಯಕರಾಗಿರುವ ಪುತ್ತಿಲ ಅವರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲು ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಪುತ್ತೂರು ಬಿಜೆಪಿ ಅಧ್ಯಕ್ಷ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ದರಲ್ಲದೆ, ಕಳೆದ ವಿಧಾನಸಭಾ ಚುನಾವಣೆ ವೇಳೆ ಪಕ್ಷೇತರರಾಗಿ ಸ್ಪರ್ಧಿಸಿ 62,458 ಮತ ಗಳಿಸಿದ್ದರು. ಇಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಇಲ್ಲಿ ಕಾಂಗ್ರೆಸ್‌ ಗೆಲುವಿನ ಗೆರೆ ದಾಟಿತ್ತು.

ಅದೇ ರೀತಿ ಈ ಬಾರಿ ನಳಿನ್‌ ಕುಮಾರರಿಗೆ ಟಿಕೆಟ್‌ ಕೊಟ್ಟರೆ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿಯುವ ಎಚ್ಚರಿಕೆ ಕೊಟ್ಟಿದ್ದರು. ಈಗ ಕ್ಯಾ.ಬ್ರಜೇಶ್‌ ಚೌಟರಿಗೆ ಟಿಕೆಟ್‌ ಘೋಷಿಸಿದ್ದು, ಇದರ ಬೆನ್ನಲ್ಲೇ ಪುತ್ತಿಲ ಸೇರ್ಪಡೆಗೆ ಬಿಜೆಪಿ ವಲಯದಲ್ಲಿ ಹಸಿರು ನಿಶಾನೆ ದೊರೆತಿದೆ. ಈ ಮೂಲಕ ಪುತ್ತೂರಿನಲ್ಲಿನ ಬಿಜೆಪಿ ಬಣ ತಿಕ್ಕಾಟ ಕೊನೆಗೊಳ್ಳಲಿದೆ.

ಫೆ. 5ರಂದು ನಡೆದ ಪುತ್ತಿಲ ಪರಿವಾರದ ಸಮಾಲೋಚನ ಸಭೆಯಲ್ಲಿ ಸ್ಥಾನಮಾನ, ಪಕ್ಷ ಸೇರ್ಪಡಗೆ ಮೂರು ದಿನಗಳ ಗಡುವು ನೀಡಲಾಗಿತ್ತು. ಬಿಜೆಪಿ ಮುಖಂಡರು ಸಕಾಲದಲ್ಲಿ ಸ್ಪಂದಿಸದ ಕಾರಣ ಪಕ್ಷೇತರ ಸ್ಪರ್ಧೆಯ ಮುನ್ಸೂಚನೆ ನೀಡಿದ್ದರು.

ಪಕ್ಷ ಸೇರ್ಪಡೆ ಬಳಿಕವಷ್ಟೇ ಅರುಣ್‌ ಪುತ್ತಿಲ ಅವರಿಗೆ ಗೌರವಯುತ ಹುದ್ದೆ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ ಎನ್ನಲಾಗಿದ್ದು ಇದಕ್ಕೆ ಪುತ್ತಿಲ ಸಹಮತ ಸೂಚಿಸಿದ್ದಾರೆ ಎನ್ನಲಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ ಅವರು ‘ ಮೋದಿ ಪರಿವಾರದ ಜತೆ ಪುತ್ತಿಲ ಪರಿವಾರ ಕೆಲಸ ಮಾಡಲಿದೆ. ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸಕ್ಕೆ ನಾವೆಲ್ಲರೂ ಕೈಜೋಡಿಸಲಿದ್ದೇವೆ. ದಕ್ಷಿಣ ಕನ್ನಡದ ಬಿಜೆಪಿ ಅಭ್ಯರ್ಥಿಯನ್ನು ದೊಡ್ಡ ಅಂತರದಿಂದ ಗೆಲ್ಲಿಸುವಲ್ಲಿ ನಾವು ಶ್ರಮ ವಹಿಸುತ್ತೇವೆ” ಎಂದು ಹೇಳಿದರು.

ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಈಗಾಗಲೇ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಕಣಕ್ಕಿಳಿಸಿ ಪ್ರಚಾರ ಆರಂಭಿಸಿದ್ದು, ಪುತ್ತಿಲ ಪರಿವಾರ ಬಿಜೆಪಿಯೊಂದಿಗೆ ಒಂದಾಗಿರುವುದು ಪುತ್ತೂರು ಭಾಗದಲ್ಲಿ ಮಾತ್ರವಲ್ಲದೆ ದಕ್ಷಿಣಕನ್ನಡದಲ್ಲಿ ಪಕ್ಷಕ್ಕೆ ಧೈರ್ಯ ಹೆಚ್ಚಿಸಿದೆ.

Check Also

ಕಾರವಾರ: ಮಳೆಗೆ ಗುಡ್ಡ ಕುಸಿದು ʻಕಾರವಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ‌ʼ ಬಂದ್ : ವಾಹನ ಸವಾರರ ಪರದಾಟ

ಕಾರವಾರ : ರಾಜ್ಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು, ಭಾರೀ ಮಳೆಯಿಂದಾಗಿ ಗುಡ್ಡ ಕುಸಿದ ಪರಿಣಾಮ ಕಾರವಾರ-ಬೆಂಗಳುರು ರಾಷ್ಟ್ರೀಯ ಹೆದ್ದಾರಿ ಸಂಚಾರ …

Leave a Reply

Your email address will not be published. Required fields are marked *

You cannot copy content of this page.