

ಕೋಟ : ಸಾಸ್ತನ ಟೋಲ್ ಗೇಟ್ ಬಳಿಯ ಲಾರಿ ನಿಲುಗಡೆ ಸ್ಥಳದಲ್ಲಿ ಗುಜರಾತ್ ರಾಜ್ಯದ ನೋಂದಣಿ ಸಂಖ್ಯೆ ಹೊಂದಿದ್ದ ಲಾರಿಯೊಂದರಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ಟೋಲ್ ಸಮೀಪ ಬುಧವಾರದಿಂದಲೂ ಗುಜರಾತ್ ನೋಂದಣಿ ಸಂಖ್ಯೆ ಹೊಂದಿದ್ದ ಲಾರಿಯೊಂದು ನಿಂತಿತ್ತು. ಗುರುವಾರ ಸಂಜೆ ಸುನಿಲ್ ಕುಮಾರ್ ಅನುಮಾನದಿಂದ ಲಾರಿ ಬಳಿ ಹೋಗಿ ನೋಡಿದಾಗ ಎದುರಿನ ಸೀಟಿನ ಕೆಳಗೆ ಓರ್ವ ವ್ಯಕ್ತಿ ಮಲಗಿರುವುದು ಕಂಡುಬಂದಿದೆ. ಪರಿಶೀಲಿಸಲಾಗಿ ಆತ ಮೃತಪಟ್ಟಿರುವುದು ಅರಿವಾಯಿತು. ಅವರು ತಕ್ಷಣ ಕೋಟ ಪೊಲೀಸರಿಗೆ ಮಾಹಿತಿ ನೀಡಿದರು.
ಪೊಲೀಸರು ಆಗಮಿಸಿ ಲಾರಿಯಲ್ಲಿ ದೊರೆತ ಫೋನ್ ನಂಬ್ರಕ್ಕೆ ಕರೆ ಮಾಡಿ ಲಾರಿ ಮಾಲಕರನ್ನು ಸಂಪರ್ಕಿಸಿದರು.
ಲಾರಿ ಕೇರಳದಿಂದ ಗುಜರಾತ್ ಗೆ ಬರುತ್ತಿದ್ದು, ಚಾಲಕ ತಾಯಿರ್ ಬಾಯಿ (55), ಹಾಗೂ ಆತ ಹೃದ್ರೋಗಿ ಎಂಬುದು ತಿಳಿಯಿತು. ಇದೇ ಕಾರಣದಿಂದ ಆತ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಬುಧವಾರ ಸಂಜೆಯಿಂದ ಮೇ 8 ರ ಗುರುವಾರ ಮಧ್ಯಾಹ್ನದೊಳಗೆ ಚಾಲಕ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಕೋಟ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೀವನ್ ಮಿತ್ರ ನಾಗರಾಜ್ ಪುತ್ರನ್ ಮೃತದೇಹವನ್ನು ಕುಂದಾಪುರ ಶವಗಾರಕ್ಕೆ ಸಾಗಿಸಲು ನೆರವಾದರು.