‘ನನಗೆ ಕ್ಯಾನ್ಸರ್ ಇದೆ ಎಂದು ಅಪ್ಪ ಅಮ್ಮನಿಗೆ ಹೇಳಬೇಡಿ…’: 6ವರ್ಷದ ಬಾಲಕನ ಮಾತಿಗೆ ವೈದ್ಯರು ಭಾವುಕ|

6ನೇ ವಯಸ್ಸಿನಲ್ಲಿ ಕ್ಯಾನ್ಸರ್‌ಗೆ ತುತ್ತಾದ ಮಗುವೊಂದು ತನ್ನ ಪೋಷಕರಿಗೆ ಈ ವಿಷಯ ಹೇಳಬೇಡಿ ಎಂದು ವೈದ್ಯರಲ್ಲಿ ಮನವಿ ಮಾಡಿರುವ ಬಗ್ಗೆ ತೆಲಂಗಾಣದ ಹೈದರಾಬಾದ್​ನ ನರತಜ್ಞರು ಮಾಡಿರುವ ಟ್ವೀಟ್​ ವೈರಲ್ ಆಗಿದೆ.

ಹೈದರಾಬಾದ್ (ತೆಲಂಗಾಣ) : ‘ನನಗೆ ಕ್ಯಾನ್ಸರ್ ಬಂದಿದೆ.

ಕೊನೆಯ ಹಂತದಲ್ಲಿದ್ದೇನೆ. ಹೆಚ್ಚು ಕಾಲ ಬದುಕುವುದಿಲ್ಲ. ದಯವಿಟ್ಟು ಈ ವಿಷಯವನ್ನು ನನ್ನ ಪೋಷಕರಿಗೆ ಹೇಳಬೇಡಿ. ಅವರಿಗೆ ಸಹಿಸಲಾಗುವುದಿಲ್ಲ’ ಎಂದು ಆರು ವರ್ಷದ ಬಾಲಕನೊಬ್ಬ ವೈದ್ಯರಿಗೆ ಹೇಳಿದ ಮಾತುಗಳಿವು. ಕ್ಯಾನ್ಸರ್ ಬಂದರೆ ದೊಡ್ಡವರೂ ಸಹ ಭಯಪಡುತ್ತಾರೆ. ಎಳೆ ವಯಸ್ಸಿನ ಹೃದಯ ಇಂಥದ್ದನ್ನು ಸಹಿಸಬಹುದೇ? ಆದರೆ, ಈ ಬಾಲಕ ಹೆದರಲಿಲ್ಲ. ಧೈರ್ಯದಿಂದ ಹೋರಾಡಲು ಬಯಸಿದ್ದ. ತನ್ನ ಮೇಲೆ ಭರವಸೆ ಇಟ್ಟಿದ್ದ ಪೋಷಕರು ನೊಂದುಕೊಳ್ಳುವರೆಂದು ವೈದ್ಯರಿಗೆ ಈ ವಿಷಯ ತಿಳಿಸಬೇಡಿ ಎಂದು ಬೇಡಿಕೊಂಡಿದ್ದಾನೆ. ಹೈದರಾಬಾದ್‌ನ ಖ್ಯಾತ ನರರೋಗ ತಜ್ಞ ಡಾ.ಸುಧೀರ್ ಕುಮಾರ್ ಪುಟ್ಟ ಬಾಲಕನ ಕಥೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಒಂದು ದಿನ ನಾನು ರೋಗಿಗಳನ್ನು ನೋಡುತ್ತಿದ್ದಾಗ ಯುವ ಜೋಡಿ ನನ್ನ ಬಳಿಗೆ ಬಂದರು. ಅವರು ತಮ್ಮ 6 ವರ್ಷದ ಮಗನನ್ನು ಹೊರಗಡೆ ಕುಳ್ಳಿರಿಸಿ ನನ್ನ ಹತ್ರ ಬಂದು ನನ್ನ ಮಗನಿಗೆ ಕ್ಯಾನ್ಸರ್ ಇದೆ. ಆದ್ರೆ ಆ ವಿಷಯ ಮಗುವಿಗೆ ಹೇಳಬೇಡಿ ಎಂದು ಮನವಿ ಮಾಡಿದರು. ಅವನ ಆರೋಗ್ಯದ ಬಗ್ಗೆ ಗಮನಿಸಿ. ಚಿಕಿತ್ಸೆಯ ಬಗ್ಗೆ ಸಲಹೆಗಳನ್ನು ನೀಡಿ. ಆದರೆ ಕಾಯಿಲೆ ಬಗ್ಗೆ ಹೇಳಬೇಡಿ ಎಂದು ವಿನಂತಿಸಿದರು. ನಾನು ಸರಿ ಅಂದೆ. ಆ ನಂತರ ಮನುವನ್ನು ಗಾಲಿಕುರ್ಚಿಯಲ್ಲಿ ನನ್ನಲ್ಲಿಗೆ ಕರೆತರಲಾಯಿತು. ಅವನ ತುಟಿಗಳಲ್ಲಿ ನಗು. ಮಗು ತುಂಬಾ ಆತ್ಮವಿಶ್ವಾಸ ಮತ್ತು ಬುದ್ಧಿವಂತರಂತೆ ತೋರುತ್ತಿದ್ದ. ಆತನ ವೈದ್ಯಕೀಯ ವರದಿಗಳನ್ನು ಪರಿಶೀಲಿಸಿದ ಬಳಿಕ ಮಗುವಿಗೆ ನಾಲ್ಕನೇ ಹಂತದ ಬ್ರೈನ್ ಕ್ಯಾನ್ಸರ್ ತಗುಲಿರುವುದು ಗೊತ್ತಾಯಿತು. ಇದರಿಂದ ಬಲಗೈ ಮತ್ತು ಕಾಲು ನಿಷ್ಕ್ರಿಯಗೊಂಡಿತ್ತು. ಸ್ವಲ್ಪ ಸಮಯದವರೆಗೆ ಚಿಕಿತ್ಸೆಯ ಬಗ್ಗೆ ಚರ್ಚಿಸಿ, ಆತ ತನ್ನ ಪೋಷಕರನ್ನು ಹೊರಹೋಗುವಂತೆ ಹೇಳಿದ್ದಾನೆ.’

 

ಅವರು ಹೊರಹೋದ ನಂತರ,’ ಡಾಕ್ಟರ್​, ನಾನು ಐಪಾಡ್​ನಲ್ಲಿ ಈ ರೋಗದ ಬಗ್ಗೆ ಕಲಿತಿದ್ದೇನೆ. ಆರು ತಿಂಗಳಿಗಿಂತ ಹೆಚ್ಚು ಕಾಲ ಕಾಲ ಬದುಕಲಾರೆ. ಆದರೆ, ಈ ವಿಷಯವನ್ನು ನನ್ನ ತಂದೆ-ತಾಯಿಗೆ ಹೇಳಬೇಡಿ. ಅವರು ಅದನ್ನು ಸಹಿಸುವುದಿಲ್ಲ ಎಂದು ಕೇಳಿಕೊಂಡ. ಅದನ್ನು ಕೇಳಿ ಸ್ವಲ್ಪ ಹೊತ್ತು ಮೂಕನಾದೆ. ಆಮೇಲೆ ಅವನಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸು, ಹುಷಾರಾಗಿರು ಅಂತ ಹೇಳಿದೆ. ಆ ನಂತರ ನಾನು ಮನುವಿಗೆ ಹೊರಹೋಗಲು ಸೂಚಿಸಿದೆ. ತಂದೆ-ತಾಯಿ ಬಳಿ ಮಾತನಾಡಿದೆ. ಮನು ಹೇಳಿದ್ದನ್ನೆಲ್ಲ ಅವರಿಗೂ ಹೇಳಿದೆ. ಯಾಕೆಂದರೆ ಇಂತಹ ಸೂಕ್ಷ್ಮ ವಿಷಯಗಳು ಮನೆಯವರಿಗೆ ಗೊತ್ತಿರಲೇಬೇಕು. ಆಗ ಮಾತ್ರ ನೀವು ಅವನನ್ನು ಕೊನೆಯ ದಿನಗಳಲ್ಲಿಯೂ ಸಂತೋಷವಾಗಿರಿಸಬಹುದು ಎಂದು ತಿಳಿಸಿದೆ. ಮನು ಹೆತ್ತವರು ಕಣ್ಣೀರು ಸುರಿಸಿ, ಭಾರವಾದ ಹೃದಯದೊಂದಿಗೆ ಮನೆಗೆ ತೆರಳಿದರು.

‘ಕೆಲವು ದಿನಗಳ ನಂತರ ನಾನು ಇದನ್ನು ಮರೆತುಬಿಟ್ಟೆ. ಸುಮಾರು 9 ತಿಂಗಳ ನಂತರ ದಂಪತಿ ನನ್ನನ್ನು ನೋಡಲು ಬಂದಿದ್ದರು. ಅವರನ್ನು ನೆನೆದು ಮನುವಿನ ಬಗ್ಗೆ ಕೇಳಿದೆ. ಒಂದು ತಿಂಗಳ ಹಿಂದೆ ಮನು ನಮ್ಮನ್ನೆಲ್ಲ ಬಿಟ್ಟು ಮರಳಿ ಬಾರದ ಲೋಕಕ್ಕೆ ಪಯಣಿಸಿದ. ಈ 8 ತಿಂಗಳು ಮನುವನ್ನು ತುಂಬಾ ಖುಷಿಯಿಂದ ನೋಡಿಕೊಂಡಿದ್ದೇವೆ’ ಎಂದು ಪೋಷಕರು ನನ್ನ ಬಳಿ ಹೇಳಿದ್ದಾರೆ’ ಎಂದು ವೈದ್ಯರು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಮಗುವಿನ ಧೈರ್ಯ ಮತ್ತು ಪೋಷಕರ ಪ್ರೀತಿಯನ್ನು ಜನರು ಮೆಚ್ಚಿದ್ದಾರೆ. ಮನುವಿನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸಿದ್ದಾರೆ.

Check Also

ಮಣಿಪಾಲ: ಮನೆಯೊಂದರ ಅಂಗಳದಲ್ಲಿ ಚಿರತೆ ಸಂಚಾರ..! ಸ್ಥಳೀಯರಲ್ಲಿ ಆತಂಕ

ಮಣಿಪಾಲ: ಉಡುಪಿ ನಗರದ ಮಣಿಪಾಲದ ಬಳಿಯ ಪೆರಂಪಳ್ಳಿಯ ಮನೆಯೊಂದರ ಅಂಗಳದಲ್ಲಿ ಶುಕ್ರವಾರ ರಾತ್ರಿ ಚಿರತೆ ಸಂಚಾರ ಕಂಡು ಬಂದಿದ್ದು, ಘಟನೆ …

Leave a Reply

Your email address will not be published. Required fields are marked *

You cannot copy content of this page.