![](https://thrishulnews.com/wp-content/uploads/2024/03/WhatsApp-Image-2024-03-12-at-11.54.26-AM.jpeg)
ವಿಜಯಪುರ: ಕೇಂದ್ರದ ಮಾಜಿ ಸಚಿವ, ಹಾಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಧೈರ್ಯ, ನೇರ ನಡೆನುಡಿಗೆ ಹೆಸರಾದವರು. ಅವರು ಕೂಡ ಕಣ್ಣೀರು ಸುರಿಸುತ್ತಾರೆಯೇ ಎಂದು ಆಶ್ಚರ್ಯ ಪಡಬೇಡಿ. ಅಂಥದೊಂದು ಘಟನೆ ನಡೆದಿದೆ.
ನಿನ್ನೆ ವಿಜಯಪುರದಲ್ಲಿ ಲಿಂಗೈಕ್ಯರಾದ ಶ್ರೀ ಸಿದ್ದೇಶ್ವರ ಸ್ವಾಮಿಗಳ ಪಾರ್ಥಿವ ಶರೀರ ನೋಡಿ ಯತ್ನಾಳ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಅವರು ಕಣ್ಣೀರು ಹಾಕಿದ ವಿಡಿಯೋ ಈಗ ವೈರಲ್ ಆಗಿದೆ.
ಜ್ಞಾನಯೋಗಾಶ್ರಮದಿಂದ ಸೈನಿಕ ಶಾಲೆಗೆ ಪಾರ್ಥಿವ ಶರೀರ ತಂದು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸುವ ಮುನ್ನ ನಡೆದ ತಯಾರಿ ವೇಳೆಯಲ್ಲಿ ಯತ್ನಾಳ್ ಕಣ್ಣೀರು ಸುರಿಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಎಂ.ಬಿ. ಪಾಟೀಲ್ ಕೂಡ ಯತ್ನಾಳ್ ಅವರ ಪಕ್ಕದಲ್ಲೇ ಇದ್ದರು.
ಶ್ರೀಗಳು ಅಸ್ವಸ್ಥರಾದಾಗಿನಿಂದಲೂ ಯತ್ನಾಳ್ ಜ್ಞಾನ ಯೋಗಾಶ್ರಮ ಬಿಟ್ಟು ಕದಲಿರಲಿಲ್ಲ. ನಿನ್ನೆ ಸಂಜೆ ಶ್ರೀಗಳು ಲಿಂಗೈಕ್ಯರಾದ ಸಂದರ್ಭದಲ್ಲಿ ಯತ್ನಾಳ್ ಮತ್ತು ಎಂ.ಬಿ. ಪಾಟೀಲ್ ಅಲ್ಲೇ ಇದ್ದರು.