
ಉಡುಪಿ: ಧರ್ಮಸ್ಥಳದಿಂದ ಉಡುಪಿಗೆ ಬರುವ ಬಸ್ನಿಂದ ಕಲ್ಸಂಕ ಜಂಕ್ಷನ್ ಬಳಿ ಇಳಿದು ದಾರಿ ತಪ್ಪಿ ಅಲೆಯುತ್ತಿದ್ದ ಆರು ವರ್ಷದ ಬಾಲಕನನ್ನು ಸಂಚಾರಿ ಪೊಲೀಸ್ ಸಿಬ್ಬಂದಿ ರಾಜಪ್ಪ ಅವರು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದ್ದಾರೆ.
ಬಳ್ಳಾರಿ ಮೂಲದ ಈ ಬಾಲಕ ತನ್ನ ಪೋಷಕರೊಂದಿಗೆ ಧರ್ಮಸ್ಥಳದಿಂದ ಉಡುಪಿಗೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ. ಬಸ್ ಬನ್ನಂಜೆ ಸರ್ಕಾರಿ ಬಸ್ ನಿಲ್ದಾಣವನ್ನು ತಲುಪುವ ಮೊದಲೇ, ಪೋಷಕರ ಗಮನಕ್ಕೆ ಬಾರದಂತೆ ಬಾಲಕ ಬಸ್ನಿಂದ ಕೆಳಗಿಳಿದಿದ್ದನು.
ಬಳಿಕ ಆತ ಕಲ್ಸಂಕ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಅಲ್ಲಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ರಾಜಪ್ಪ ಅವರು ಬಾಲಕನನ್ನು ಗಮನಿಸಿ ವಿಚಾರಣೆ ನಡೆಸಿದ್ದಾರೆ.
ಮಗು ನೀಡಿದ ಮಾಹಿತಿಯ ಆಧಾರದ ಮೇಲೆ, ರಾಜಪ್ಪ ಅವರು ಆತನನ್ನು ಬನ್ನಂಜೆ ಸರ್ಕಾರಿ ಬಸ್ ನಿಲ್ದಾಣಕ್ಕೆ ಕರೆದೊಯ್ದು, ಅಲ್ಲಿ ಆತನ ಪೋಷಕರನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಒಪ್ಪಿಸಿದ್ದಾರೆ. ಪೋಷಕರು ಮತ್ತು ಸಾರ್ವಜನಿಕರು ಪೊಲೀಸ್ ಸಿಬ್ಬಂದಿಯ ಈ ಸಮಯೋಚಿತ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
