

ಮಂಗಳೂರು: ಪ್ರೀತಿಸಿದ್ದ ಯುವತಿ ಕೈಕೊಟ್ಟಿದ್ದಾಳೆಂದು ಮನನೊಂದ ಯುವಕನೋರ್ವನು ನೇಣಿಗೆ ಶರಣಾಗಿರುವ ಘಟನೆ ಮಂಗಳೂರು ತಾಲೂಕಿನ ಮುತ್ತೂರು ಗ್ರಾಮದ ತಾರೆಮಾರ್ ಅರ್ಭಿ ಎಂಬಲ್ಲಿ ಸೋಮವಾರ ನಡೆದಿದೆ. ಚಂದ್ರಶೇಖರ (32) ಆತ್ಮಹತ್ಯೆಗೆ ಶರಣಾದ ಯುವಕ. ಮೇಸ್ತ್ರಿ ಕೆಲಸ ಮಾಡುತ್ತಿದ್ದ ಈತ ಹಲವು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆಕೆ ದೂರವಾಗುತ್ತಿದ್ದಂತೆ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ. ಚಂದ್ರಶೇಖರ ಎಂದಿನಂತೆ ಕೆಲಸ ಮುಗಿಸಿ ಮನೆಗೆ ಬಂದಿದ್ದಾನೆ. ಬಳಿಕ ಸ್ನೇಹಿತನೊಬ್ಬನಿಗೆ ವಾಯ್ಸ್ ಮೆಸೇಜ್ ಕಳುಹಿಸಿ ಬೈಕ್ ಇರುವ ಜಾಗ ತಿಳಿಸಿ ಅದನ್ನು ಕೊಂಡೊಯ್ಯುವಂತೆ ತಿಳಿಸಿದ್ದಾನೆ. ಆತ ಸೂಚಿಸಿದ್ದ ಸ್ಥಳಕ್ಕೆ ಆಗಮಿಸಿದಾಗ ಚಂದ್ರಶೇಖರ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ತಾನು ಆತ್ಮಹತ್ಯೆ ಮಾಡಲು ಪ್ರೀತಿಸುತ್ತಿದ್ದ ಯುವತಿಯೇ ಕಾರಣ ಎಂದು ಡೆತ್ನೋಟ್ ಬರೆದಿದ್ದು ಆಕೆಯ ಹೆಸರು ಮೊಬೈಲ್ ನಂಬರ್ ಬರೆದಿಟ್ಟಿದ್ದಾನೆ ಎಂದು ತಿಳಿದುಬಂದಿದೆ. ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.