

ಉಪ್ಪಿನಂಗಡಿ: ಕಾಲೇಜ್ ವಿದ್ಯಾರ್ಥಿ ಅರಸಿನಮಕ್ಕಿ ನಿವಾಸಿ ತೀರ್ಥೇಶ್ ಎಂ. (18ವ.)ನಾಪತ್ತೆಯಾಗಿರುವ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಇದೀಗ ಬೆಂಗಳೂರಿನ ಹೊಸೂರಿನಲ್ಲಿ ಪತ್ತೆಯಾಗಿರುವುದಾಗಿ ವರದಿಯಾಗಿದೆ. ಶನಿವಾರದಂದು ಮುಂಜಾನೆ ಮನೆಯಿಂದ ಕಾಲೇಜಿಗೆಂದು ಹೊರಟ ತೀರ್ಥೇಶ ಕಾಲೇಜಿನಲ್ಲಿ ವಾಲಿಬಾಲ್ ಪಂದ್ಯಾಟವಿದೆ ಎಂಬ ಕಾರಣ ನೀಡಿ ಬಟ್ಟೆ ಬರೆಗಳನ್ನು ಕೊಂಡೊಯ್ದಿದ್ದನು. ತೀರ್ಥೇಶ್ ನಾಪತ್ತೆಯಾಗಿರುವ ಬಗ್ಗೆ ಆತನ ತಂದೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಹೊಸೂರಿನಲ್ಲಿ ಶಿವಮೊಗ್ಗ ಮೂಲದ ವ್ಯಕ್ತಿಯೊಬ್ಬರು ತೀರ್ಥೇಶ್ ನಾಪತ್ತೆ ವಿಷಯ ವಾಟ್ಸಪ್ ಮೂಲಕ ಹರಿದಾಡುತ್ತಿರುವುದನ್ನು ಗಮನಿಸಿ ಶಿವಮೊಗ್ಗದಲ್ಲಿದ್ದ ಈತನನ್ನು ವಿಚಾರಿಸಿದಾಗ ಆತ ಮನೆಯ ಮೊಬೈಲ್ ಸಂಖ್ಯೆ ನೀಡಿದ್ದು, ತಕ್ಷಣ ಮನೆಯವರಿಗೆ ಕರೆ ಮಾಡಿ ಮಗ ಹೊಸೂರಿನಲ್ಲಿರುವ ಬಗ್ಗೆ ಮಾಹಿತಿ ನೀಡಿದರು. ತೀರ್ಥೇಶ್ನ ತಂದೆ ವಿಜಯಚಂದ್ರರವರು ಉಪ್ಪಿನಂಗಡಿ ಠಾಣೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರನ್ನು ಕರೆದುಕೊಂಡು ಬೆಂಗಳೂರಿಗೆ ತೆರಳಿ ಮಗನನ್ನು ಕರೆದುಕೊಂಡು ಬಂದಿರುವುದಾಗಿ ವರದಿಯಾಗಿದೆ.