ಬೆಳ್ತಂಗಡಿ : ಆಗಸ್ಟ್ 25ರಿಂದ ಧರ್ಮಸ್ಥಳದಿಂದ ನಾರಾವಿಗೆ ಬಸ್ ಸಂಚಾರ ಆರಂಭವಾಗಲಿದೆ ಎಂದು ಕೆಎಸ್ಆರ್ಟಿಸಿ ಧರ್ಮಸ್ಥಳ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.
ಮಾಜಿ ಶಾಸಕ ಕೆ.ವಸಂತ ಬಂಗೇರ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸರಕಾರದ ಸಾರಿಗೆ ಸಚಿವರಿಗೆ ಪತ್ರ ಬರೆದು ಬಸ್ ಸಂಚಾರವನ್ನು ಆರಂಭಿಸುವಂತೆ ವಿನಂತಿಸಿದ್ದರು. ಇದೀಗ ಕೆಎಸ್ಆರ್ಟಿಸಿ ಹೊಸ ಬಸ್ ಸಂಚಾರವನ್ನು ಆರಂಭಿಸಲು ಮುಂದಾಗಿದೆ. ಪ್ರತಿದಿನ ಬೆಳಗ್ಗೆ 6:35ಕ್ಕೆ ಧರ್ಮಸ್ಥಳದಿಂದ ಹೊರಡುವ ಬಸ್ ಉಜಿರೆ-ಬೆಳ್ತಂಗಡಿ- ಗುರುವಾಯನಕೆರೆ ಮಾರ್ಗವಾಗಿ 7:40ಕ್ಕೆ ನಾರಾವಿ ತಲುಪಿ ಅಲ್ಲಿಂದ 7:45 ಕ್ಕೆ ಹೊರಟು 8:55 ಕ್ಕೆ ಧರ್ಮಸ್ಥಳ ತಲುಪಲಿದೆ. ಸಂಜೆ 4:30ಕ್ಕೆ ಧರ್ಮಸ್ಥಳದಿಂದ ಹೊರಟು 5:35ಕ್ಕೆ ನಾರಾವಿ ತಲುಪಿ, ಅಲ್ಲಿಂದ 5:40ಕ್ಕೆ ಹೊರಟು 6:45ಕ್ಕೆ ಧರ್ಮಸ್ಥಳಕ್ಕೆ ವಾಪಸ್ಸಾಗಲಿದೆ. ಗುರುವಾಯನಕೆರೆ- ಅಳದಂಗಡಿ -ನಾರಾವಿ ಮಾರ್ಗಗಳಲ್ಲಿ ಬಸ್ ಗಳ ಸಂಚಾರ ಇಲ್ಲದ ಕಾರಣ ಇಲ್ಲಿನ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದರು. ಕಳೆದ ಕೆಲವು ವರ್ಷಗಳ ಬೇಡಿಕೆ ಇದಾಗಿದ್ದು ಇದೀಗ ಈ ರೂಟ್ ನಲ್ಲಿ ಬೆಳಿಗ್ಗೆ ಹಾಗೂ ಸಂಜೆ ಬಸ್ ಸಂಚಾರ ನಡೆಸುವ ಕಾರಣ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಶಕ್ತಿ ಯೋಜನೆ ಆರಂಭವಾದರೂ ಈ ಪ್ರದೇಶದ ಮಹಿಳೆಯರಿಗೆ ಯಾವುದೇ ಅನುಕೂಲತೆ ಲಭಿಸಿರಲಿಲ್ಲ. ಇದೀಗ ಹೊಸ ಬಸ್ ಆರಂಭವಾಗಿರುವುದು ಎಲ್ಲರಿಗೂ ಪ್ರಯೋಜನಕಾರಿಯಾಗಲಿದೆ