ಸುರತ್ಕಲ್: ಜೆಸಿಬಿ ಯಂತ್ರ ಬಳಸಿ ಎಟಿಎಂ ಹಣ ಕದಿಯಲು ಕಳ್ಳರು ವಿಫಲ ಯತ್ನ ನಡೆಸಿದ ಘಟನೆ ಸುರತ್ಕಲ್ ನಲ್ಲಿ ನಡೆದಿದ್ದು, ಕಳ್ಳರು ಪರಾರಿಯಾಗಿದ್ದಾರೆ.
ಕಳವಿಗೆ ಯತ್ನಕ್ಕೆ ಬಳಸಿದ ಜೆಸಿಬಿ ಯಂತ್ರ ಜೋಕಟ್ಟೆ ಬಳಿ ಪತ್ತೆಯಾಗಿದೆ.
ಸುರತ್ಕಲ್ನ ವಿದ್ಯಾದಾಯಿನೀ ಶಾಲಾ ಮುಂಭಾಗದಲ್ಲಿರುವ ಸೌತ್ ಇಂಡಿಯನ್ ಬ್ಯಾಂಕ್ನ ಶಾಖಾ ಕಚೇರಿಯ ಎಟಿಎಂ ಕೇಂದ್ರದಲ್ಲಿ ಜೆಸಿಬಿ ಬಳಸಿ ಹಣ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಈ ಘಟನೆ ಶುಕ್ರವಾರ ಮುಂಜಾನೆ 2 ಗಂಟೆಗೆ ನಡೆದಿತ್ತು.
ಕಳ್ಳತನ ಯತ್ನದ ವೇಳೆ ಸಕಾಲದಲ್ಲಿ ಬ್ಯಾಂಕ್ ಸೈರನ್ ಮೊಳಗಿದ್ದರಿಂದ ಜೆಸಿಬಿ ಸಹಿತ ಕಳ್ಳರು ಪರಾರಿಯಾಗಿದ್ದಾರೆ.
ಆದರೆ ಸಿಕ್ಕಿ ಬೀಳುವ ಭೀತಿಯಿಂದ ಕೃತ್ಯಕ್ಕೆ ಬಳಸಿದ ಜೆಸಿಬಿಯನ್ನು ಜೋಕಟ್ಟೆ ಬಳಿ ಬಿಟ್ಟು ಹೋಗಿದ್ದಾರೆ.
ಎರಡು ದಿನಗಳ ಹಿಂದೆ ಪಡುಬಿದ್ರೆಯಿಂದ ಕಳವು ಮಾಡಿದ ಜೆಸಿಬಿ ಇದೆಂದು ತಿಳಿದು ಬಂದಿದೆ.
ಸುರತ್ಕಲ್ನ ವಿದ್ಯಾದಾಯಿನಿ ಶಿಕ್ಚಣ ಸಂಸ್ಥೆಯ ಬಳಿ ಹೆದ್ದಾರಿ ಒಂದು ಬದಿ ವಾಣಿಜ್ಯ ಕಟ್ಟಡಗಳು ಮಾತ್ರ ಇದ್ದು, ಇನ್ನೊಂದು ಬದಿ ಶಾಲಾ ವಠಾರವಿದೆ.
ಇಲ್ಲಿನ ಹೆದ್ದಾರಿಯ ಅಂಡರ್ ಪಾಸ್ ಮೇಲ್ಛಾವಣಿ ಅಡ್ಡವಿರುವುದರಿಂದ ಹೆದ್ದಾರಿಯಲ್ಲಿ ಸಾಗುವ ವಾಹನಗಳಿಗೆ ತತ್ಕ್ಷಣಕ್ಕೆ ಕಾಣದ ಕಾರಣದಿಂದ ಇದೇ ಸ್ಥಳದಲ್ಲಿನ ಎಟಿಎಂ ದೋಚಲು ಕಳ್ಳಲು ಯತ್ನಿಸಿದ್ದಾರೆ.
ಜೆಸಿಬಿಯಿಂದ ಗೋಡೆ ಒಡೆದು ಹಾಕಿದ ಪರಿಣಾಮ ತಡೆಗೋಡೆ ಕೆಳಗೆ ಉರುಳಿ ಬಿದ್ದರೆ, ಕಟ್ಟಡದ ಶೆಟರ್ನ ಕೀಲು ಒಂದೇ ಏಟಿಗೆ ಹೊರಗೆ ಬಂದಿದೆ.
ಮುಂಭಾಗದಲ್ಲಿ ಅಳವಡಿಸಿದ್ದ ಗಾಜನ್ನು ಒಡೆದು ಹಾಕಿದ ಬಳಿಕ ಒಳಗಿದ್ದ ಎಟಿಎಂ ಯಂತ್ರವನ್ನು ಒಡೆದು ಸಾಗಿಸಲು ಮುಂದಾದಾಗ ಸೈರನ್ ಮೊಳಗುತ್ತಿದ್ದರಿಂದ ಜನರು ಹಾಗೂ ಪೊಲೀಸರು ಬರುವ ಭೀತಿಯಿಂದ ಅರ್ದದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಎಟಿಎಂ ಯಂತ್ರ ಒಡೆಯುವ ಸಂದರ್ಭ ಬ್ಯಾಂಕ್ ಮ್ಯಾನೇಜರ್ಗೆ ಸೈರನ್ ಸಂದೇಶ ಹೋಗಿದೆ.
ತತ್ಕ್ಷಣ ಇದಕ್ಕೆ ಸ್ಪಂದಿಸಿ ಪೊಲೀಸರಿಗೆ ಮಾಹಿತಿ ನೀಡಿ, ಬ್ಯಾಂಕ್ ಅಧಿಕಾರಿಗಳು ಬಂದಾಗ ಅದಾಗಲೇ ಕಳ್ಳರು ಜೆಸಿಬಿ ಸಹಿತ ಪರಾರಿಯಾಗಿದ್ದರು.
ಶುಕ್ರವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಡಿಸಿಪಿ ದಿನೇಶ್ ಕುಮಾರ್ ಆಗಮಿಸಿ ಪರಿಶೀಲನೆ ನಡೆಸಿದರು.
ಶ್ವಾನ ದಳ ಮತ್ತು ಬೆರಳಚ್ಚು ತಜ್ಞರ ತಂಡವನ್ನು ಕರೆಸಲಾಗಿತ್ತು.
ಕಳ್ಳರು ಜೆಸಿಬಿ ಮೂಲಕವೇ ಕಳ್ಳತಕ್ಕೆ ಸಂಚು ರೂಪಿಸಿದ್ದರಿಂದ ಹೆಚ್ಚಿನ ಸಾಕ್ಷ್ಯಗಳು ಲಭ್ಯವಾಗಿಲ್ಲ.
ಎಟಿಎಂ ಯಂತ್ರವನ್ನು ಚಿಕ್ಕದೊಂದು ಬೋಲ್ಟ್ ಮೂಲಕ ನಿಲ್ಲಿಸಲಾಗಿದ್ದು ಜೆಸಿಬಿಯಲ್ಲಿ ದೂಡಿದ ಪರಿಣಾಮ ಒಂದೇ ಎಟಿಗೆ ಕಿತ್ತು ಬಂದಿತ್ತು.
ಅಲ್ಲದೆ ಈ ಬ್ಯಾಂಕ್ ಶಾಖೆಗೆ ಕಾವಲುಗಾರರು ಇಲ್ಲದ್ದನ್ನು ಗಮನಿಸಿಕೊಂಡೇ ಮುಸುಕು ಹಾಕಿದ ಬಂದ ಕಳ್ಳರ ತಂಡ ಈ ಕೃತ್ಯ ಎಸಗಿದೆ.
ಎಟಿಎಂ ಕೇಂದ್ರದಲ್ಲಿ ಭದ್ರತೆಗಾಗಿ ಸಿಸಿ ಕಣ್ಗಾವಲು ಮಾತ್ರ ಇದೆ.