ಉಡುಪಿ : ಖಾಸಗಿ ಕಾಲೇಜಿನ ಶೌಚಾಲಯವೊಂದರಲ್ಲಿ ವಿಡಿಯೋ ಚಿತ್ರೀಕರಿಸಿದ್ದರು ಎನ್ನಲಾದ ಪ್ರಕರಣವೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಈ ಪ್ರಕರಣ ಕುರಿತಾದ ವಿಚಾರಣೆಗಾಗಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ, ಬಿಜೆಪಿ ನಾಯಕಿ ನಟಿ ಖುಷ್ಬೂ ಸುಂದರ್ ಉಡುಪಿಗೆ ಆಗಮಿಸಿದ್ದಾರೆ.
ಇನ್ನು, ಉಡುಪಿಗೆ ಬಂದ ಕೂಡಲೇ ಮಾಧ್ಯಮದವರ ಜತೆ ಮಾತಾಡಿದ ಖುಷ್ಬೂ ಸುಂದರ್, ಖಾಸಗಿ ಕಾಲೇಜು ವಿದ್ಯಾರ್ಥಿಗಳ ಸಮಸ್ಯೆ ಕುರಿತು ವಿಚಾರಿಸಲು ಬಂದಿದ್ದೇನೆ. ಪ್ರಕರಣದ ಕುರಿತು ಪೊಲೀಸರನ್ನು ಭೇಟಿಯಾಗಿ ಅಗತ್ಯ ಮಾಹಿತಿಯನ್ನು ಕಲೆ ಹಾಕುತ್ತೇನೆ. ಯುವತಿಯರ ವಿರುದ್ಧ ದಾಖಲಾದ ಪ್ರಾಥಮಿಕ ತನಿಖಾ ವರದಿ (ಎಫ್ಐಆರ್) ಪಡೆಯುತ್ತೇನೆ ಎಂದರು.ನಾಳೆ ಖಾಸಗಿ ಕಾಲೇಜಿಗೆ ಭೇಟಿ ನೀಡುವೆ. ಬಳಿಕ ಸಂತ್ರಸ್ತ ಯುವತಿ ಮಾತ್ರವಲ್ಲದೆ ಮೂವರು ವಿದ್ಯಾರ್ಥಿನಿಯರ ಜತೆ ಕೂಡ ಮಾತಾಡುತ್ತೇನೆ. ಇದರ ಕುರಿತು ಸವಿವರವಾಗಿ ಕಾಲೇಜು ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸುವೆ ಎಂದು ಮಾಹಿತಿ ನೀಡಿದರು.
ಏನಿದು ಘಟನೆ..!!??
ಮೂರು ದಿನಗಳ ಹಿಂದೆ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ಒಂದು ಕೋಮಿನ ವಿದ್ಯಾರ್ಥಿನಿಯರು ಮತ್ತೊಂದು ಧರ್ಮಕ್ಕೆ ಸೇರಿದ ಯುವತಿ ವಿಡಿಯೋ ಚಿತ್ರೀಕರಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಸುದ್ದಿಗೋಷ್ಠಿ ನಡೆಸಿ, ತಮಾಷೆಗಾಗಿ ವಿಡಿಯೋ ಮಾಡಿರುವುದಾಗಿ ಯುವತಿರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು.
ಸದ್ಯ ಈ ಕೇಸ್ ಸಂಬಂಧ ಪೊಲೀಸರು ಮೂವರು ವಿದ್ಯಾರ್ಥಿನಿಯರ ಮೇಲೆ ಎಫ್ಐಆರ್ ಮಾಡಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಇದರ ಬಗ್ಗೆ ಪೋಸ್ಟ್ ಹಾಕಿದ್ದ ಯುವತಿ ವಿರುದ್ಧವೂ ಸುಳ್ಳು ಸುದ್ದಿ ಹರಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಿದ್ದರು ಎಂದು ಕೇಸ್ ಹಾಕಲಾಗಿದೆ.