
ಮೂಡುಬಿದಿರೆ: ತಾಲೂಕಿನ ವಾಲ್ಪಾಡಿ ಗ್ರಾಮದಲ್ಲಿ ಗುರುವಾರ ಸುರಿದ ಭಾರಿ ಮಳೆ ಹಾಗೂ ಗಾಳಿಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ವಸತಿ ಮತ್ತು ಕೃಷಿ ಭೂಮಿಗೆ ತೀವ್ರ ಹಾನಿಯಾಗಿದೆ.
ಭಾರೀ ಮಳೆ ಸುರಿದ ವೇಳೆ ಬೃಹತ್ ಮರವೊಂದು ಮನೆಯ ಮೇಲೆ ಉರುಳಿ ಬಿದ್ದ ಪರಿಣಾಮ, ಶೇಖರ ಪೂಜಾರಿ ಎಂಬುವವರ ಪತ್ನಿ ಸುಂದರಿ ಎಂಬುವವರು ಗಾಯಗೊಂಡಿದ್ದಾರೆ. ಇದೇ ಗ್ರಾಮದ ರಾಜು ಎಂಬುವವರ ಮನೆಗೂ ಮಳೆಯಿಂದಾಗಿ ಹಾನಿಯಾಗಿದೆ.
ಗಾಳಿಯ ರಭಸಕ್ಕೆ ಹಲವಾರು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಈ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಗಾಳಿ ಮಳೆಯಿಂದಾಗಿ ಅಡಿಕೆ/ತೆಂಗು ಸೇರಿದಂತೆ ಕೃಷಿ ತೋಟಗಳಿಗೆ ವ್ಯಾಪಕ ಹಾನಿಯಾಗಿದ್ದು, ಸ್ಥಳೀಯ ರೈತರಿಗೆ ಭಾರಿ ನಷ್ಟ ಉಂಟಾಗಿದೆ.
