
ಕಾಸರಗೋಡು : ಪಶ್ಚಿಮ ಎಲೆರಿ ಪಂಚಾಯತ್ ವ್ಯಾಪ್ತಿಯಲ್ಲಿ ಸಂಬಂಧಿಕರ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ನಾಗರಹಾವು ಕಚ್ಚಿದ್ದರಿಂದ ನಾಲ್ಕು ವರ್ಷದ ಬಾಲಕಿ ರಿತು ಚಂದ್ರ ಗುರುವಾರ ಮೃತಪಟ್ಟಿದ್ದಾಳೆ. ಕಳೆದ ಮೂರು ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕಿ, ಚಿಕಿತ್ಸೆ ಫಲಿಸದೆ ಕಣ್ಣೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ದಿನಗೂಲಿ ಕಾರ್ಮಿಕ ಶರತ್ ಚಂದ್ರನ್ ಮತ್ತು ಅಜಿತಾ ದಂಪತಿಯ ಪುತ್ರಿ ರಿತು ಚಂದ್ರ ಸೋಮವಾರ ಮಧ್ಯಾಹ್ನ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದಳು. ಕಾಂಪೌಂಡ್ನ ಅಂಚಿಗೆ ಉರುಳಿದ ಚೆಂಡನ್ನು ತರಲು ಹೋದಾಗ ಬಿಲದಲ್ಲಿದ್ದ ನಾಗರಹಾವು ಬಾಲಕಿಯ ತೋರುಬೆರಳಿಗೆ ಕಚ್ಚಿತ್ತು. ಬಾಲಕಿಯ ಕೂಗು ಕೇಳಿ ಓಡಿಬಂದ ಕುಟುಂಬಸ್ಥರು ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಬಾಲಕಿಯನ್ನು ಮೊದಲು ಪಯ್ಯನ್ನೂರ್ ಬೇಬಿ ಸ್ಮಾರಕ ಆಸ್ಪತ್ರೆಗೆ, ನಂತರ ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಪ್ರತಿವಿಷ (Antivenom) ನೀಡಲಾಗಿತ್ತು. ಸ್ಥಿತಿ ಸುಧಾರಿಸದ ಕಾರಣ ಬುಧವಾರ ಕಣ್ಣೂರಿನ ಆಸ್ಟರ್ ಮಿಮ್ಸ್ಗೆ ಸ್ಥಳಾಂತರಿಸಲಾಗಿತ್ತು. ಹಾವಿನ ನ್ಯೂರೋಟಾಕ್ಸಿಕ್ ವಿಷವು ಉಸಿರಾಟಕ್ಕೆ ತೊಂದರೆ ನೀಡಿ ಮೆದುಳಿಗೆ ಆಮ್ಲಜನಕದ ಕೊರತೆಯುಂಟಾಗುವಂತೆ ಮಾಡಿದ್ದರಿಂದ ಹಾಗೂ ಹೃದಯ ವೈಫಲ್ಯದಿಂದ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಕೇರಳದಲ್ಲಿ ಕಳೆದ ಒಂದು ವಾರದಲ್ಲೇ ಹಾವು ಕಡಿತಕ್ಕೆ ಆರು ಮಂದಿ ಬಲಿಯಾಗಿದ್ದಾರೆ. ಇತ್ತೀಚೆಗೆ ಇಡುಕ್ಕಿ, ಕಣ್ಣೂರು, ಆಲಪ್ಪುಳ ಮತ್ತು ತ್ರಿಶೂರ್ ಜಿಲ್ಲೆಗಳಲ್ಲೂ ಹಾವು ಕಡಿತದಿಂದ ಸಾವಿನ ಪ್ರಕರಣಗಳು ವರದಿಯಾಗಿವೆ.
