March 20, 2026
WhatsApp Image 2026-01-17 at 7.52.54 AM

ವರದಿ : ಧನುಶ್ ಕುಲಾಲ್ ಶಕ್ತಿನಗರ

ಮಂಗಳೂರು : ಶಕ್ತಿನಗರ ಕಾನಡ್ಕದ ಪದವು ಫ್ರೆಂಡ್ಸ್ ಕ್ಲಬ್ ನ ಸ್ವರ್ಣ ಸಂಭ್ರಮವನ್ನು ವಿಶೇಷವಾಗಿ ಆಚರಿಸುವ ಪ್ರಯುಕ್ತ ಜ. 17 ಹಾಗೂ 18 ರಂದು’ಪಿ.ಎಫ್.ಸಿ ಪುತ್ತೋಲಿ ಪರ್ಬ’ ಆಹಾರ ಮೇಳ, ಪ್ರದರ್ಶನ, ಸನ್ಮಾನ ಮತ್ತು ಮನರಂಜನಾ ಕಾರ್ಯಕ್ರಮವು ಶಕ್ತಿನಗರದ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಸ್ವರ್ಣ ಸಂಭ್ರಮ ಸಮಿತಿಯ ಸಂಚಾಲಕ ಹರೀಶ್ ಕುಮಾರ್ ಜೋಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲೇ ಇದೇ ಮೊದಲ ಬಾರಿಗೆ ಫ್ರೆಂಡ್ಸ್ ಕ್ಲಬ್ ಒಂದು ಆಹಾರ ಮೇಳವೊಂದನ್ನು ಆಯೋಜಿಸುತ್ತಿದ್ದು, ೨ ದಿನಗಳ ಕಾಲ ನಡೆಯುವ ಈ ಆಹಾರ ಮೇಳದಲ್ಲಿ ಸುಮಾರು 30ಕ್ಕೂ ಹೆಚ್ಚು ನಾನಾ ಖಾದ್ಯಗಳ ಮಳಿಗೆಗಳು ಹಾಗೂ ಸುಮಾರು 10ಕ್ಕೂ ಹೆಚ್ಚು ನಾನಾ ಪ್ರದರ್ಶನ, ಆಟದ ಮಳಿಗೆಗಳು ಇರಲಿವೆ. ಜ. 17 ರಂದು ಶಾಸಕ ವೇದವ್ಯಾಸ ಕಾಮತ್ ಹಾಗೂ ಮತ್ತಿತರ ಗಣ್ಯರು ಪರ್ಬವನ್ನು ಉದ್ಘಾಟಿಸಲಿದ್ದಾರೆ. ಜ 18 ರಂದು ಸಂಜೆ 7ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ತುಳು, ಕನ್ನಡ ಚಿತ್ರರಂಗ ಹಾಗೂ ರಂಗಭೂಮಿಯ ಹೆಸರಾಂತ ಕಲಾವಿದ ಕುಸಲ್ದರಸೆ ನವೀನ್ ಡಿ. ಪಡೀಲ್‌ ರವರನ್ನು ಗೌರವಿಸಿ, ಸನ್ಮಾನಿಸಲಾಗುವುದು. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚಿರುವ ಕ್ರೀಡಾ ಪ್ರತಿಭೆಗಳಾದ ನಿಷ್ಕಾ ರೈ, ಹಿಮಾನಿ ಪಿ. ಸುವರ್ಣ, ಸೌಭಾಗ್ಯ ಜೋಗಿ, ಪದವು ಅಂಗನವಾಡಿಯ ನಿವೃತ್ತ ಸಹಾಯಕಿ ಜಾನಕಿ ಹಾಗೂ ಮತ್ತಿತರರನ್ನು ಗೌರವಿಸಲಾಗುವುದು. ಮನರಂಜನೆಯ ಅಂಗವಾಗಿ ಸ್ಥಳೀಯ ೪ ಅಂಗನವಾಡಿ ಶಾಲೆಯ ಮಕ್ಕಳಿಂದ ನೃತ್ಯ ಪ್ರದರ್ಶನ, ಸ್ಥಳೀಯ ಸಂಘ ಸಂಸ್ಥೆಗಳಿಂದ ಹಾಗೂ ತಂಡಗಳಿಂದ ವೈವಿಧ್ಯಮಯ ಕಾರ್ಯಕ್ರಮಗಳು, ಶಿಬರೂರು ಬ್ಯಾಂಡ್ ತಂಡದಿಂದ ಟ್ರಂಪೆಟ್ ಬ್ಯಾಂಡ್ ತಾಸೆ ಜುಗುಲ್ ಬಂದಿ, ಬಿಕರ್ನಕಟ್ಟೆ ವೀರಮಾರುತಿ ವ್ಯಾಯಾಮ ಶಾಲೆಯ ತಂಡದಿಂದ ತಾಲೀಮು ಪ್ರದರ್ಶನ ಹಾಗೂ ದಿ ನ್ಯೂ ಓಶನ್ ಕಿಡ್ಸ್ ತಂಡದಿಂದ ನೃತ್ಯ ವೈಭವ ನಡೆಯಲಿದೆ. ಸಂಸ್ಥೆಯ ಸ್ವರ್ಣ ಸಂಭ್ರಮ ವಾರ್ಷಿಕೋತ್ಸವದ ಕಾರ್ಯಕ್ರಮಗಳು ಫೆ. 13 ರಿಂದ 17 ರವರೆಗೆ ನಾನಾ ಮನರಂಜನಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಹೇಳಿದರು.

ಪದವು ಫ್ರೆಂಡ್ಸ್ ಕ್ಲಬ್ ಲೆಕ್ಕಪರಿಶೋಧಕ ರವೀಂದ್ರ ರೈ ಮಾತನಾಡಿ, ಪದವು ಫ್ರೆಂಡ್ಸ್ ಕ್ಲಬ್ ಸಂಸ್ಥೆಯು ಕಳೆದ ೫೦ ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ, ಕ್ರೀಡೆ ಹಾಗೂ ಧಾರ್ಮಿಕ ಸೇವೆಯಲ್ಲಿ ತೊಡಗಿಸಿಕೊಂಡು ಶಕ್ತಿನಗರ ಪರಿಸರದ ಅಭಿಮಾನದ, ಹೆಮ್ಮೆಯ ಸಂಸ್ಥೆ ಎಂಬ ಹೆಗ್ಗಳಿಕೆಯೊಂದಿಗೆ ಬೆಳೆದು ಇದೀಗ ಸ್ವರ್ಣ ಸಂಭ್ರಮದ ಸಡಗರದಲ್ಲಿದೆ. ವಿಶೇಷವಾಗಿ ಸ್ಥಳೀಯ ಸರಕಾರಿ ವಿದ್ಯಾಸಂಸ್ಥೆಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಸರ್ವ ರೀತಿಯ ಸಹಕಾರವನ್ನು ನೀಡುತ್ತಾ ಬಂದಿದೆ. ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತೀವರ್ಷ ಆಟೋಟ ಸ್ಪರ್ಧೆ ಹಾಗೂ ಕಲಿಯುವಿಕೆಯಲ್ಲಿ ಬಹುಮಾನ ನೀಡುತ್ತಿರುವುದಲ್ಲದೆ, ಅವರ ಪ್ರತಿಭೆಗಳನ್ನು ಪ್ರದರ್ಶಿಸಲು ನಮ್ಮ ಸಂಸ್ಥೆಯ ವಾರ್ಷಿಕೋತ್ಸವದ ವೇದಿಕೆಯಲ್ಲಿ ಅವಕಾಶ ನೀಡುತ್ತಾ ಬಂದಿದೆ. ೧೫ ವರ್ಷಗಳ ಹಿಂದೆ ಶಕ್ತಿನಗರದಲ್ಲಿ ಪ್ರೌಢ ಶಾಲೆ ಹಾಗೂ ೨ ವರ್ಷಗಳ ಹಿಂದೆ ಪದವಿ ಪೂರ್ವ ಕಾಲೇಜು ಆರಂಭವಾಗುವಲ್ಲಿ ಸಂಸ್ಥೆಯ ನಿರಂತರ ಪ್ರಯತ್ನ ಅಡಗಿದೆ ಎಂದು ಹೇಳಿದರು.

ಪದವು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕುಶಾಲ್ ಕುಮಾರ್ ಕೆ., ಕಾರ್ಯದರ್ಶಿ ರಾಮಕೃಷ್ಣ ಭಟ್, ಕೋಶಾಧಿಕಾರಿ ರವಿಚಂದ್ರ ಹಾಗೂ ಸ್ವರ್ಣ ಸಂಭ್ರಮ ಸಮಿತಿ ಉಪಾಧ್ಯಕ್ಷ ದಿನೇಶ್ ಟಿ. ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *

You cannot copy content of this page.