
ಉಡುಪಿ: ಕಾರ್ಕಳ ಅಭಿಷೇಕ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಯುವತಿಯ ಅಶ್ಲೀಲ ವಿಡಿಯೋ ವಾಟ್ಸಾಪ್ ಗ್ರೂಪ್ಗೆ ಹಾಕಿದ್ದೆ ಅಭಿಷೇಕ್ ಎಂದು ಉಡುಪಿ ಎಸ್ಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.
ಕಾರ್ಕಳ ಅಭಿಷೇಕ ಆತ್ಮಹತ್ಯೆ ಪ್ರಕರಣದಲ್ಲಿ ಹನಿಟ್ರ್ಯಾಪ್ ಬಗ್ಗೆ ಯಾವುದೇ ಸಾಕ್ಷಿ ಇಲ್ಲ – ಯುವತಿ ಅಶ್ಲೀಲ ವಿಡಿಯೋ ವಾಟ್ಸಾಪ್ ಗ್ರೂಪ್ಗೆ ಹಾಕಿದ್ದೆ ಅಭಿಷೇಕ್ ಎಂದು ತಿಳಿಸಿದ್ದಾರೆ. ಈ ಪ್ರಕರಣದ ಎಲ್ಲಾ ಆರೋಪಿಗಳ ಮೊಬೈಲ್ ಗಳನ್ನು ಪರಿಶೀಲನೆ ಮಾಡಲಾಗಿದೆ. ಆರೋಪಿತ ಮೊಬೈಲ್ ದಾಖಲೆಗಳ ಆದಾರದಲ್ಲಿ ಬ್ಯಾಂಕ್ ವಹಿವಾಟು, ಫೋನ್ ಕರೆ ಹಾಗೂ ಚಾಟ್ ದಾಖಲೆಗಳನ್ನು ಆಧರಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಅದೇ ರೀತಿ ಅಭಿಷೇಕನ ಸ್ನೇಹಿತರು, ಬಂಧುಗಳು ಮತ್ತು ಸಂಬಂಧಿಕರನ್ನು ಕೂಡ ವಿಚಾರಣೆ ಮಾಡಿದ್ದಾರೆ.ಮೇಲಿನ ಎಲ್ಲಾ ವಿಚಾರಣೆ ಬಳಿಕ ಪೊಲೀಸರು ಈ ಪ್ರಕರಣದಲ್ಲಿ ಯಾವುದೇ ಹನಿಟ್ರ್ಯಾಪ್ ಸಂಬಂಧಿಸಿದಂತೆ ಯಾವುದೇ ಸಾಕ್ಷಿ ಸಿಕ್ಕಿಲ್ಲ ಎಂದಿದ್ದಾರೆ.
ಆರೋಪಿ ಯುವತಿಯ ಮೊಬೈಲ್ನಲ್ಲಿ ಯಾವುದೇ ರೀತಿಯ ಅಶ್ಲೀಲ ಫೋಟೋ ಅಥವಾ ವಿಡಿಯೋಗಳು ಸಿಕ್ಕಿಲ್ಲ ಮತ್ತು ಆಕೆ ಯಾವುದೇ ವಿಡಿಯೋವನ್ನು ಯಾರಿಗೂ ಕಳುಹಿಸಿರುವುದಿಲ್ಲ ಎಂಬುದು ತನಿಖೆಯಿಂದ ಗೊತ್ತಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಅಭಿಷೇಕ್ ಯುವತಿಗೆ ಕಳುಹಿಸಿದ್ದ ಹಣವನ್ನು ಅವಳು ಅದೇ ದಿನ ವಾಪಾಸ್ಸು ಕೊಟ್ಟಿರುವುದು ಕಂಡು ಬಂದಿದೆ’ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಡೆತ್ ನೋಟ್ ನಲ್ಲಿದ್ದ ತೇಜಸ್ ಎಂಬ ಯುವಕನ ನಾಪತ್ತೆ ಕುರಿತಂತೆ ಅಭಿಷೇಕ್ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಪೊಲೀಸರಿಗೆ ಈ ಮೊದಲೇ ತಿಳಿಸಿದ್ದಾನೆ. ಆತ್ಮಹತ್ಯೆಗೂ ಮುನ್ನ ಅಭಿಷೇಕ್ ಆರೋಪಿ ಯುವತಿಯ ಅಶ್ಲೀಲ ವಿಡಿಯೋವನ್ನು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯ ಸಹೋದ್ಯೋಗಿಗಳ ವಾಟ್ಸಾಪ್ ಗ್ರೂಪ್ಗೆ ಹಂಚಿದ್ದು, ಈ ವಿಷಯ ತಿಳಿದ ನಂತರ, ಆಕೆ ಈ ಕುರಿತು ಪೊಲೀಸರಿಗೆ ದೂರು ನೀಡುವುದಾಗಿ ಆತನಿಗೆ ತಿಳಿಸಿದ್ದಳು. ಈಗ ವೈರಲ್ ಆಗುತ್ತಿರುವ ವಿಡಿಯೋವನ್ನು ಆರೋಪಿ ಯುವತಿಯ ಸ್ನೇಹಿತೆಯೇ ತನ್ನ ಉಡುಪು ಬದಲಿಸುವ ಸಮಯದಲ್ಲಿ ಸ್ವತಃ ರೆಕಾರ್ಡ್ ಮಾಡಿ, ಆ ಯುವತಿಗೆ ಖಾಸಗಿ ರೀತಿಯಲ್ಲಿ ವಾಟ್ಸಾಪ್ ಮೂಲಕ ಕಳುಹಿಸಿದ್ದಳು. ಆದರೆ ಆ ವಿಡಿಯೋವನ್ನು ಅಭಿಷೇಕ್, ಯುವತಿಯ ವಾಟ್ಸಾಪ್ ಮೂಲಕ ಪಡೆದಿದ್ದನು ಎಂದು ಎಸ್ಪಿ ತಿಳಿಸಿದ್ದಾರೆ.
ಅಭಿಷೇಕ್ ಮೊಬೈಲ್ನ್ನು ಹೆಚ್ಚಿನ ಪರಿಶೀಲನೆಗಾಗಿ ಎಫ್ಐಎಲ್ಗೆ ಕಳುಹಿಸಲಾಗಿದ್ದು, ಅದರಲ್ಲಿನ ವಿವರದ ಮಾಹಿತಿ ಪಡೆಯಲು ಬಾಕಿ ಇದೆ. ಮಂಗಳೂರು ಲೇಡಿಗೋಷನ್ ಆಸ್ಪತ್ರೆಯಲ್ಲಿ ಆರೋಪಿ, ಯುವತಿ ಯೋರ್ವಳ ಸ್ನೇಹಿತೆಯ ಉಡುಪು ಬದಲಿಸುವ ವಿಡಿಯೋ ತೆಗೆದ ಕಾರಣ ಹಾಗೂ ಅದನ್ನು ದುರುದ್ದೇಶಕ್ಕಾಗಿ ಬಳಸಲಾಗಿದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಡೆತ್ನೋಟ್ನಲ್ಲಿನ ಕೈಬರಹ ದೃಢೀಕರಣ ಕಾರ್ಯ ಪ್ರಗತಿಯಲ್ಲಿದೆ ಎಂದು ಎಸ್ಪಿ ಹರಿರಾಂ ಶಂಕರ್ ಹೇಳಿದ್ದಾರೆ. ಈ ಬಗ್ಗೆ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೃತ ಅಭಿಷೇಕ್ ಮತ್ತು ಆರೋಪಿ ಯುವತಿ ಕುರಿತು ಅಶ್ಲೀಲ ಪೋಸ್ಟ್ಗಳು ಹರಿದಾಡುತ್ತಿದ್ದು, ಇದು ಕಾನೂನಾತ್ಮಕವಾಗಿ ಶಿಕ್ಷಾರ್ಹ ವಾಗಿವೆ. ಈ ಕುರಿತು ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ಹರ್ಷ ಪ್ರಿಯಂವದ, ಅಭಿಷೇಕ್ ಅವರ ಕುಟುಂಬ ಹಾಗೂ ಸ್ಥಳೀಯ ನಾಯಕರೊಂದಿಗೆ ನೇರವಾಗಿ ಮಾತನಾಡಿ ಪರಿಸ್ಥಿತಿಯನ್ನು ವಿವರಿಸಿದ್ದಾರೆ ಎಂದಿದ್ದಾರೆ.
