
ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಿನ್ನದ ಕಳ್ಳತನ ಪ್ರಕರಣವನ್ನು ಪೊಲೀಸರು ಶೀಘ್ರವೇ ಭೇದಿಸಿದ್ದಾರೆ.
ಪಿರ್ಯಾದಿ ಬಸವ ಪೂಜಾರಿ (72), ಯಡಾಡಿ ಮತ್ಯಾಡಿ ಗ್ರಾಮದ ನಿವಾಸಿಯವರು ತಮ್ಮ ಮನೆಯ ಗೋದ್ರೇಜ್ನಲ್ಲಿ ಇಟ್ಟುಕೊಂಡಿದ್ದ 18 ಗ್ರಾಂ ತೂಕದ ಚಿನ್ನದ ಸರವನ್ನು ಕಳ್ಳರು ಕಳವು ಮಾಡಿದ್ದರು. ಕಳ್ಳತನವು ಸೆಪ್ಟೆಂಬರ್ 26ರ ಸಂಜೆ 7 ಗಂಟೆಯಿಂದ 27ರ ಬೆಳಿಗ್ಗೆ 9 ಗಂಟೆಯ ನಡುವಿನ ಅವಧಿಯಲ್ಲಿ ನಡೆದಿದೆ. ಕಳವಾದ ಸರದ ಮೌಲ್ಯ ಸುಮಾರು ರೂ. 1 ಲಕ್ಷ 45 ಸಾವಿರ ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 176/2025, ಕಲಂ 331(4) ಹಾಗೂ 305 ಬಿ.ಎನ್.ಎಸ್. ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
ತನಿಖೆ ಕೈಗೊಂಡ ಪಿ.ಎಸ್.ಐ ಪ್ರವೀಣ ಕುಮಾರ್, ಸುಧಾ ಪ್ರಭು ಮತ್ತು ಠಾಣಾ ಸಿಬ್ಬಂದಿಯರು ಶೀಘ್ರ ಕ್ರಮ ಕೈಗೊಂಡು ಆರೋಪಿ ಆನಂದ (26), ಶಿರಿಯಾರ ಗ್ರಾಮದ ನಿವಾಸಿಯನ್ನು ಬಂಧಿಸಿ, ಕಳವಾದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಈ ತ್ವರಿತ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
