
ಉಡುಪಿ : ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಗೆ ಮತ್ತು ನ್ಯಾಯಾಲಯಕ್ಕೆ ನಕಲಿ ಇನ್ಸೂರೆನ್ಸ್ ಪಾಲಿಸಿ ಸೃಷ್ಟಿಸಿ ನೀಡಿ ವಂಚಿಸಿರುವ ಬಗ್ಗೆ ಬಸ್ರೂರು ಶ್ರೀ ಶಾರದಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ಇದರ ಮಾಲಕರ ವಿರುದ್ಧ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಹುಣ್ಸೆಮಕ್ಕಿಯಲ್ಲಿ 25/11/2024 ರಂದು ಶಾಲಾ ವಾಹನ ರಿಕ್ಷಾಕ್ಕೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆದು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಕೆ ಮಾಡಲಾಗಿತ್ತು. ಪ್ರಕರಣದ ವಿಚಾರಣೆ ಕುಂದಾಪುರದ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವಾಗ ಪ್ರಕರಣದಲ್ಲಿ ರಿಕ್ಷಾ ಚಾಲಕ ಉದಯ ವಿಮಾ ಪರಿಹಾರ ಕೋರಿ ಅರ್ಜಿ ಸಲ್ಲಿಸಿರುತ್ತಾರೆ. ಆಗ ವಿಮಾ ಕಂಪೆನಿಯವರು ಶಾಲಾ ವಾಹನದ ವಿಮಾ ಪಾಲಿಸಿಯನ್ನು ಪರಿಶೀಲಿಸಿದಾಗ ಪಾಲಿಸಿ ನಕಲಿ ಎಂಬುವುದಾಗಿ ಕಂಡುಬಂದಿರುತ್ತದೆ . ಆದ್ದರಿಂದ ಆರೋಪಿ ಶ್ರೀ ಶಾರದಾ ಇಂಗ್ಲಿಷ್ ಮೀಡಿಯಂ ಶಾಲೆಯ ಮಾಲಕರ ವಿರುದ್ಧ ನಕಲಿ ವಿಮಾ ಸೃಷ್ಟಿಸಿ ಠಾಣೆಗೆ ಮತ್ತು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿ ಈ ಮೂಲಕ ವಿಮಾ ಕಂಪೆನಿಗೆ ಮೋಸ ಮಾಡಿರುವುದಾಗಿ ರಿಲಯನ್ಸ್ ಜನರಲ್ ಇನ್ಸೂರೆನ್ಸ್ ಕಂಪೆನಿಯ ಮ್ಯಾನೇಜರ್ ನೀಡಿದ ದೂರಿನನ್ವಯ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
