March 17, 2026
WhatsApp Image 2025-07-29 at 6.01.11 PM

ವಿಟ್ಲ: ಕೆಲಸಕ್ಕೆಂದು ತೆರಳಿ ಬಳಿಕ ನಾಪತ್ತೆಯಾಗಿದ್ದ ಕಡೇಶಿವಾಲಯ ಗ್ರಾಮದ ಕೊರತಿಗುರಿ ನಿವಾಸಿ, ಯುವಕನೋರ್ವನ ದ್ವಿಚಕ್ರ ವಾಹನ ಹಾಗೂ ಆತನ ಮೊಬೈಲ್ ಫೋನ್ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಬಡ್ಡಕಟ್ಟೆ ಸಮೀಪದ ಜಕ್ರಿಬೆಟ್ಟು ಡ್ಯಾಂ ಬಳಿ ಅನಾಥವಾಗಿ ಪತ್ತೆಯಾಗಿದೆ.

ಬಂಟ್ವಾಳ ತಾಲೂಕು ಕಡೇಶಿವಾಲಯ ಗ್ರಾಮದ ಕೊರತಿಗುರಿ ನಿವಾಸಿ ಜಗದೀಶ್ ಆಚಾರ್ಯ ರವರ ಪುತ್ರ ಹೇಮಂತ್ ರವರು ಜು.28ರಂದು ಫರಂಗಿಪೇಟೆಗೆ ಕೆಲಸಕ್ಕೆಂದು ತೆರಳಿ ಆ ಬಳಿಕ ನಾಪತ್ತೆಯಾಗಿದ್ದ. ಈ ಬಗ್ಗೆ ಆತನಿಗಾಗಿ ವಿವಿದೆಡೆ ಹುಡುಕಾಟ ನಡೆಸಿದ ಅವರ ಮನೆಮಂದಿ ಜು.29ರಂದು ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಆತನ ಪತ್ತೆಗಾಗಿ ವಿವಿದೆಡೆ ಹುಡುಕಾಟ ಆರಂಭಿಸಿದ್ದರು. ಈ ಮಧ್ಯೆ ಹೇಮಂತ್ ಆಚಾರ್ಯ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಹಾಗೂ ಆತನ ಮೊಬೈಲ್ ಫೋನ್ ರಾಷ್ಟ್ರೀಯ ಹೆದ್ದಾರಿ ಬಿಸಿರೋಡು ಧರ್ಮಸ್ಥಳ ರಸ್ತೆಯ ಬಡ್ಡಕಟ್ಟೆ ಸಮೀಪದ ಜಕ್ರಿಬೆಟ್ಟು ಡ್ಯಾಂ ಬಳಿ ಪತ್ತೆಯಾಗಿದೆ.

ಹೇಮಂತ್ ಆಚಾರ್ಯ ಅವರು ನೀರಿನ ಫಿಲ್ಟರ್ ರಿಪೇರಿ ಕೆಲಸ ಮಾಡುತ್ತಿದ್ದು, ಜು.28ರಿಂದ ನಾಪತ್ತೆಯಾಗಿದ್ದರು. ಈತನ ದ್ವಿಚಕ್ರ ವಾಹನವನ್ನು ನದಿ ಕಿನಾರೆಯಲ್ಲಿ ನಿಲ್ಲಿಸಿ ನಾಪತ್ತೆಯಾಗಿರುವುದರಿಂದ ಆತನ ಪತ್ತೆಗಾಗಿ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ತಂಡ ಹಾಗೂ ಬಂಟ್ವಾಳ ನಗರ ಪೊಲೀಸ್‌ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ಪ್ರಾರಂಭಿಸಿದ್ದಾರೆ. ಇವರೊಂದಿಗೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ನುರಿತ ಈಜುಗಾರರ ತಂಡ ನೇತ್ರಾವತಿ ನದಿಯಲ್ಲಿ ಶೋಧ ಕಾರ್ಯ ಮುಂದುವರಿಸಿದೆ.

About The Author

Leave a Reply

Your email address will not be published. Required fields are marked *

You cannot copy content of this page.