
ಉಡುಪಿ : 12 ವರ್ಷಗಳ ಹಿಂದೆ ಸಂಬಂಧಿಕರಿಗೆ ತಂಪು ಪಾನೀಯದಲ್ಲಿ ಅಮಲೇರುವ ಔಷಧಿಯನ್ನು ಬೆರೆಸಿ, ಪ್ರಜ್ಞೆ ತಪ್ಪುವಂತೆ ಮಾಡಿ, ಸೊತ್ತು ಕಳವುಗೈದ ಪ್ರಕರಣದ ಆರೋಪಿಯನ್ನು ಉಡುಪಿಯ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶಿಸಿದೆ. ಸುಧೀರ್ ಪೂಜಾರಿ ಶಿಕ್ಷೆಗೆ ಗುರಿಯಾದ ಆರೋಪಿ. ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾಮದ ಮೂಡುಗರಡಿ ಎಂಬಲ್ಲಿ 2013ರ ಜನವರಿ 5ರಂದು ರಾಧ ಹಾಗೂ ಅವರ ತಾಯಿ ಭಾಗಿ ಪೂಜಾರ್ತಿ ಮನೆಯಲ್ಲಿದ್ದಾಗ ದೂರದ ಸಂಬಂಧಿ ಸುಧೀರ್ ಪೂಜಾರಿ ಬಂದಿದ್ದನು. ಮಧ್ಯಾಹ್ನ 3 ಗಂಟೆಗೆ ರಾಧರವರ ಮೊಮ್ಮಕ್ಕಳು ಶಾಲೆಯಿಂದ ಮನೆಗೆ ಬಂದಿದ್ದು, ಆಗ ಸುಧೀರ್ ಪೂಜಾರಿ, ತಾನು ತಂದಿದ್ದ ಮಿರಿಂಡಾ ತಂಪು ಪಾನೀಯವನ್ನು ರಾಧಾ, ತಾಯಿ, ಮೊಮ್ಮಕ್ಕಳಿಗೆ ಕುಡಿಯಲು ನೀಡಿದ್ದನು. ಪಾನಿಯವನ್ನು ಕುಡಿದ ನಂತರ ಅವರೆಲ್ಲರಿಗೂ ತಲೆ ಸುತ್ತು ಬಂದು ನಿದ್ರೆಗೆ ಜಾರಿದ್ದರು. ಬಳಿಕ ರಾಧ ಎಚ್ಚರಗೊಂಡಾಗ ಮನೆಯಲ್ಲಿದ್ದ ಸುಧೀರ್ ಪೂಜಾರಿ ಹೊರಟು ಹೋಗಿದ್ದು, ಮನೆಯಲ್ಲಿದ್ದ ಮೊಬೈಲ್ ಫೋನ್ ಕಳವಾಗಿತ್ತು. ನಂತರ ಅಸ್ವಸ್ಥಗೊಂಡ ರಾಧ, ಅವರ ತಾಯಿ, ಮೊಮ್ಮಕ್ಕಳನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮರುದಿನ ರಾಧಾ ಈ ಕುರಿತು ಆರೋಪಿ ಸುಧೀರ್ ಪೂಜಾರಿ ವಿರುದ್ಧ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಮೇಲಿನ ಆರೋಪ ಸಾಬೀತಾಗಿರುವುದರಿಂದ ನ್ಯಾಯಧೀಶ ಕಿರಣ್.ಎಸ್.ಗಂಗಣ್ಣನವರ್, ಆರೋಪಿಗೆ ಐಪಿಸಿ 328 ರಡಿ 1 ವರ್ಷ ಸಾದಾ ಶಿಕ್ಷೆ ಮತ್ತು 5 ಸಾವಿರ ರೂ. ದಂಡ, 380ರಡಿ 3 ತಿಂಗಳ ಸಾದಾ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ. ಸರಕಾರ ಪರವಾಗಿ ಸರಕಾರಿ ಅಭಿಯೋಜಕ ಜಯರಾಮ ಶೆಟ್ಟಿ ವಾದ ಮಂಡಿಸಿದ್ದಾರೆ.
