ಮಣಿಪಾಲ: ನಗರದಲ್ಲಿ ಯುವಕನೊಬ್ಬ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಎಂಬ ಮಾಹಿತಿ ಮೇರೆಗೆ ಮಣಿಪಾಲ ಠಾಣೆಯ ಇನ್ಸ್ಪೆಕ್ಟರ್ ದೇವರಾಜ್ ಮತ್ತು ಅವರ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಕೇರಳ ನಿವಾಸಿ ಸಿದ್ದಾರ್ಥ್ ಎಂದು ತಿಳಿದು ಬಂದಿದೆ.
ಪ್ರಕರಣದ ವಿವರ:
ದಿನಾಂಕ:05.06.2024 ರಂದು ಸಂಜೆ 05.00 ಗಂಟೆಗೆ ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕರಾದ ದೇವರಾಜ್ ಟಿ.ವಿ ರವರ ನೇತೃತ್ವದಲ್ಲಿ ಪತ್ರಾಂಕಿತ ಅಧಿಕಾರಿ ಶ್ರೀ ಶಂಕರ ಮಾನ್ಯ ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ಉಡುಪಿ ತಾಲೂಕು ಹಾಗೂ ಮಣಿಪಾಲ ಠಾಣಾ ರಾಘವೇಂದ್ರ ಸಿ, ಪೊಲೀಸ್ ಉಪನಿರೀಕ್ಷಕರು, ಎಎಸ್ಐ ವಿವೇಕಾನಂದ, ಎಎಸ್ಐ ಶೈಲೇಶ್ ಕುಮಾರ್ ಹಾಗೂ ಸಿಬ್ಬಂದಿಗಳಾದ ಸುಕುಮಾರ, ಅರುಣ ಕುಮಾರ್, ಚನ್ನೇಶ್, ಮಂಜುನಾಥರವರನ್ನೊಳಗೊಂಡ ತಂಡ ಉಡುಪಿ ತಾಲೂಕು ಹೆರ್ಗಾ ಗ್ರಾಮದ ಅಪಾರ್ಟ್ಮೆಂಟ್ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಪಾರ್ಟ್ಮೆಂಟ್ ರೂಮ್ ಮೇಲೆ ದಾಳಿ ಮಾಡಿ, ರೂಮ್ನಲ್ಲಿದ್ದ ಸಿಧ್ದಾರ್ಥ್ (22), ತಿರುವನಂತಪುರ, ಕೇರಳ ಎಂಬಾತನನ್ನು ವಶಕ್ಕೆ ಪಡೆದು ಆತನಿಂದ 20,000/- ರೂ ಮೌಲ್ಯದ ಸುಮಾರು 388 ಗ್ರಾಂ ಗಾಂಜಾ ಹಾಗೂ 45,000/- ರೂ ಮೌಲ್ಯದ ಮೊಬೈಲ್ ಫೋನ್ನನ್ನು ಜಪ್ತಿ ಮಾಡಲಾಗಿರುತ್ತದೆ.
ಈ ಗಾಂಜಾವನ್ನು ಮಣಿಪಾಲದಲ್ಲಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಲಾಭಗಳಿಸುವ ಉದ್ದೇಶದಿಂದ ಗಾಂಜಾವನ್ನು ಈ ವಿದ್ಯಾರ್ಥಿ ಶೇಖರಿಸಿ ಇಟ್ಟಿರುವುದು ತನಿಖೆಯಿಂದ ಕಂಡು ಬಂದಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 134/2024 ಕಲಂ: 20(ಬಿ) NDPS Act ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣ ತನಿಖೆಯಲ್ಲಿರುತ್ತದೆ.