ಕಾರ್ಕಳ : ದೇಶದ್ರೋಹಿ ಘೋಷಣೆ ಕೂಗಿದವರ ವಿರುದ್ಧ ಭಯೋತ್ಪಾಧನಾ ವಿರೋಧಿ ವೇದಿಕೆ ವತಿಯಿಂದ ಉಡುಪಿ ನಗರದ ಅಜ್ಜರಕಾಡು ಹುತಾತ್ಮ ಸ್ಮಾರಕದ ಮುಂಭಾಗ ಬುಧವಾರ ಪ್ರತಿಭಟನೆ ನಡೆಯಿತು. ದೇಶದ್ರೋಹ ಘೋಷಣೆ ಸಾಬೀತುಪಡಿಸಲಿ ಎಂದು ಸವಾಲು ಹಾಕಿದ್ದ ಎಂ.ಜಿ. ಹೆಗಡೆ ಭಾವಚಿತ್ರಕ್ಕೆ ಎಲೆ ಅಡಿಕೆ ತಿಂದು ಉಗುಳಿದ ಘಟನೆಯೂ ನಡೆಯಿತು. ಪ್ರತಿಭಟನಾ ಸಭೆಯ ಕೊನೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಸೇರಿದಂತೆ ಅನೇಕರು ಎಂ.ಜಿ. ಹೆಗಡೆ ಅವರ ಭಾವಚಿತ್ರಕ್ಕೆ ಉಗಿದು ಆಕ್ರೋಶ ವ್ಯಕ್ತಪಡಿಸಿದ್ದರು.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಮಾತನಾಡಿ, ರಾಜಕೀಯ ಪಕ್ಷಗಳು, ಸಂಘ – ಸಂಸ್ಥೆಗಳು ರಾಷ್ಟ್ರ ನನ್ನದು ಎಂಬ ಚಿಂತನೆ ಮೈಗೂಡಿಸಿಕೊಳ್ಳಬೇಕು. ದೇಶದ್ರೋಹಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದರು. ಸರಕಾರದಿಂದ ನಮಗೆ ಏನಾದರೂ ತೊಂದರೆಯಾಗಬಹುದೆಂದು ಕೆಲವರು ಮಾತನಾಡಲು ಮುಂದೆ ಬರುವುದಿಲ್ಲ. ಆದರೆ, ದೇಶದ ವಿಚಾರ ಬಂದಾಗ ಎಲ್ಲರೂ ಮುಂದೆ ಬರಬೇಕೆಂದರು.ಸಾಮಾಜಿಕ ಕಾರ್ಯಕರ್ತೆ ಸ್ವರ್ಣಾ ಮಾತನಾಡಿ, ಕಾಂಗ್ರೆಸ್ನ ದೇಶ ವಿರೋಧಿ ಮಾನಸಿಕತೆಗೆ ರಾಜ್ಯದ ಎರಡು ಪ್ರಮುಖ ಘಟನೆಗಳು ಸಾಕ್ಷಿಯಾಗಿದೆ. ಎರಡು ಘಟನೆಗಳನ್ನು ಎನ್ಐಎ ತನಿಖೆ ನಡೆಸಬೇಕು. ರಾಜ್ಯ ಸರಕಾರದ ತನಿಖೆ ಮೇಲೆ ನಮಗೆ ವಿಶ್ವಾಸವಿಲ್ಲ ಎಂದರು.ಸಮಿತಿಯ ಪ್ರಮುಖ, ಕಾನೂನು ವಿದ್ಯಾರ್ಥಿ ರವಿಚಂದ್ರ ಮಾತನಾಡಿದರು. ಬ್ರಹ್ಮಾವರ, ಕಾರ್ಕಳ, ಕುಂದಾಪುರ, ಬೈಂದೂರು, ಹೆಬ್ರಿ, ಕಾಪು ಭಾಗದಿಂದ ನೂರಾರು ಮಂದಿ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಶಾಸಕ ಯಶ್ಪಾಲ್ ಸುವರ್ಣ, ನಿರಂತರವಾಗಿ ಹಿಂದುಗಳ ಭಾವನೆಗೆ ಧಕ್ಕೆ ತರುವ ಕಾರ್ಯವಾಗುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಲು ವಿಫಲವಾಗಿರುವ ಸರಕಾರ ಆ ವೈಫಲ್ಯವನ್ನು ಮುಚ್ಚಿ ಹಾಕುವ ಸಲುವಾಗಿ ದೇಶದ್ರೋಹಿಗಳ ಕಾರ್ಯಗಳಿಗೆ ಬೆಂಬಲ ಕೊಡುತ್ತಿದೆ. ಪಾಕ್ ಪರ ಘೋಷಣೆ ಕೂಗಿದವರ ಪರವಾಗಿ ಸಚಿವರುಗಳು ಮಾತನಾಡಿರುತ್ತಾರೆ. ಎಫ್ಎಸ್ಎಲ್ ವರದಿಯಿಂದ ಇದೀಗ ಪಾಕ್ಪ್ರೇಮಿಗಳ ನಿಜ ಬಣ್ಣ ಬಯಲಾಗಿದೆ ಎಂದರು.