ಕಾಪು: ಮೀನುಗಾರರ ಮೇಲೆ ಹಲ್ಲೆ- ಪ್ರಕರಣ ದಾಖಲು

ಕಾಪು: ಮೀನುಗಾರಿಕೆ ನಡೆಸಿ ವಾಪಾಸ್ಸು ಬರುತ್ತಿದ್ದ ವೇಳೆ ಬೋಟಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಮೀನುಗಳನ್ನು ಸುಲಿಗೆ ಮಾಡಿ, ಐದು ಮಂದಿ ಮೀನುಗಾರರಿಗೆ ಹಲ್ಲೆ ನಡೆಸಿರುವ ಘಟನೆ ಜ.30ರಂದು ಬೆಳಗ್ಗೆ ಉಡುಪಿ ಕಾಪು ಲೈಟ್ ಹೌಸ್ ನಿಂದ 10 ನಾಟಿಕಲ್ ಮೈಲ್ ದೂರ ಸಮುದ್ರದ ಮಧ್ಯೆ ನಡೆದಿದೆ ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ಪರ್ವತಯ್ಯ, ಕೊಂಡಯ್ಯ ಎಂಬವರು ಗಂಭೀರ ಗಾಯ ಗೊಂಡಿದ್ದು, ರಘುರಾಮಯ್ಯ, ಶಿವರಾಜ್ ಹಾಗೂ ಶೀನು ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.

ಮಂಗಳೂರಿನ ಮುಹಮ್ಮದ್ ಮುಸ್ತಫ ಬಾಷಾ ಎಂಬವರ ಟ್ರಾಲ್ ಬೋಟ್ ನಲ್ಲಿ ಜ.27ರಂದು ಆಂಧ್ರಪ್ರದೇಶದ ಮೀನುಗಾರರಾದ ಪರ್ವತಯ್ಯ, ಕೊಂಡಯ್ಯ, ರಘುರಾಮಯ್ಯ, ಶಿವರಾಜ್, ಕೆ.ಶೀನು, ಏಳುಮಲೆ, ಚಿನ್ನೋಡು, ರಾಜು ಮಂಗಳೂರು ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದರು.

ಮೀನುಗಾರಿಕೆ ನಡೆಸಿ ಜ.30ರಂದು ವಾಪಾಸ್ಸು ಮಂಗಳೂರು ಬಂದರಿಗೆ ಬರುವಾಗ ಎದುರಿಗೆ ಬಂದ ಹನುಮ ಜ್ಯೋತಿ ಎಂಬ ಹೆಸರಿನ ಪರ್ಶಿನ್ ಬೋಟ್ ನಲ್ಲಿದ್ದ 15-20 ಜನರ ಪೈಕಿ 7-8 ಮಂದಿ ಟ್ರಾಲ್ ಬೋಟ್ ಒಳಗೆ ಹತ್ತಿ, ಬೋಟ್ ನಲ್ಲಿದ್ದ ಮೀನಿನ ಬಾಕ್ಸ್ ಗಳನ್ನು ತೆಗೆದು ಅವರ ಪರ್ಶಿನ್ ಬೋಟ್ ಗೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ತಡೆಯಲು ಹೋದ ಶೀನು ಮತ್ತ ರಘು ರಾಮಯ್ಯ ಅವರನ್ನು ಪರ್ಶಿನ್ ಬೋಟ್ ಬಳಿಗೆ ಬಂದ 5-7 ಜನರಿದ್ದ ನಾಡ ದೋಣಿಗೆ ಎತ್ತಿ ಹಾಕಿ ಅಲ್ಲಿಂದ ಕರೆದುಕೊಂಡು ಹೋಗಲಾಯಿತು ಅನ್ನುವ ಮಾಹಿತಿ ಇದೆ.

ಬಳಿಕ ಪರ್ಶಿನ್ ಬೋಟ್ ನಲ್ಲಿದ್ದವರು ಟ್ರಾಲ್ ಬೋಟ್ ನಲ್ಲಿದ್ದ ಮೀನುಗಾರರಿಗೆ ಹಲ್ಲೆ ನಡೆಸಿ, 4 ಮೊಬೈಲ್ ಗಳನ್ನು ಹಾಗೂ 2 ಲಕ್ಷ ಮೌಲ್ಯದ 12 ಬಾಕ್ಸ್ ಮೀನು ಗಳನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ,ತನಿಖೆ ಮುಂದುವರೆದಿದೆ.

Check Also

ಮಣಿಪಾಲ: ಪರೀಕ್ಷೆಯಲ್ಲಿ ಅನುತ್ತೀರ್ಣ – ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಆತ್ಮಹತ್ಯೆ

ಮಣಿಪಾಲ: 10 ನೇ ತರಗತಿಯ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಕಾರಣಕ್ಕೆ ಮನನೊಂದು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲದಲ್ಲಿ ನಡೆದಿದೆ.ಮೃತ ಬಾಲಕನನ್ನು ಕಾಪು …

Leave a Reply

Your email address will not be published. Required fields are marked *

You cannot copy content of this page.