March 16, 2026
WhatsApp Image 2023-12-07 at 10.26.47 AM

ಮಂಗಳೂರು: ಗದಗ ಮೂಲದ ವಲಸೆ ಕಾರ್ಮಿಕನನ್ನು ಆತನ ಪತ್ನಿಯೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಮಂಗಳೂರು ನಂತೂರು ಬಳಿ ನಡೆದಿದೆ. ಗದಗ ಜಿಲ್ಲೆ ಇಟಗಿ ಗ್ರಾಮದ ಹನುಮಂತಪ್ಪ ಪೂಜಾರಿ(39) ಕೊಲೆಯಾದ ದುರ್ದೈವಿ. ಈತನ ಪತ್ನಿ ಗೀತಾ(34) ಕೊಲೆ ಮಾಡಿದವಳು. ಮದ್ಯವ್ಯಸನಿಯಾಗಿದ್ದ ಹನುಮಂತಪ್ಪ ಪೂಜಾರಿ ಪ್ರತಿನಿತ್ಯವೂ ಪತ್ನಿಯೊಂದಿಗೆ ಜಗಳ ಮಾಡಿ, ಹೊಡೆಯುತ್ತಿದ್ದ. ಜ.10ರ ರಾತ್ರಿಯೂ ವಿಪರೀತ ಮದ್ಯ ಸೇವನೆ ಮಾಡಿ ಬಂದಿದ್ದ ಹನುಮಂತಪ್ಪ ಪತ್ನಿಯೊಂದಿಗೆ ಗಲಾಟೆ ಮಾಡಿದ್ದ. ಬಳಿಕ ಪತ್ನಿ, ಮಕ್ಕಳೊಂದಿಗೆ ಊಟ ಮಾಡಿ ಮಲಗಿದ್ದ. ಆ ಬಳಿಕ ಮತ್ತೆ ಪತಿ – ಪತ್ನಿಯ ನಡುವೆ ಗಲಾಟೆ ನಡೆದಿದೆ. ಈ ವೇಳೆ ಪತ್ನಿ ಗೀತಾ, ಹನುಮಂತಪ್ಪನ ಕತ್ತನ್ನು ಅದುಮಿ ಹಿಡಿದು ಬಳಿಕ ಪಂಚೆಯನ್ನು ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾಳೆ. ಬಳಿಕ ಪೊಲೀಸ್ ದೂರು ದಾಖಲಿಸಿದ್ದ ಗೀತಾ, ಹನುಮಂತಪ್ಪ ತಡರಾತ್ರಿ 2 ಗಂಟೆಗೆ ನೋಡುವಾಗ ಪಕ್ಕದಲ್ಲಿ ಇರಲಿಲ್ಲ. ಆದ್ದರಿಂದ ಹೊರಗಡೆ ಹೋಗಿ ನೋಡಿದಾಗ ಗೇಟಿನ ಬಳಿ ವಾಂತಿ ಮಾಡಿಕೊಂಡು ಮಾತನಾಡದ ಸ್ಥಿತಿಯಲ್ಲಿದ್ದ. ಅಣ್ಣನಿಗೆ ಕರೆ ಮಾಡಿ ವಿಚಾರ ತಿಳಿಸಿದ್ದೇನೆ. ಆತ ಬಂದ ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇವೆ. ಆದರೆ, ಪತಿ ಅಷ್ಟರಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ವಿಪರೀತ ಮದ್ಯಸೇವನೆ ಮಾಡಿ ಅಥವಾ ಯಾವುದೋ ಕಾಯಿಲೆಯಿಂದ ಮೃತಪಟ್ಟಿರಬಹುದೆಂದು ದೂರು ದಾಖಲಿಸಿದ್ದಳು.‌ ಪೊಲೀಸರು ಹನುಮಂತಪ್ಪ ಪೂಜಾರಿಯ ಮೃತದೇಹದ ಮಹಜರು ಮಾಡಿಸಿದ್ದರು. ಆಗ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ವಿಚಾರ ಬಯಲಿಗೆ ಬಂದಿದೆ. ಆಗ ಪತ್ನಿ ಗೀತಾಳನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ಆಕೆಯೇ ಹನುಮಂತಪ್ಪನನ್ನು ಕೊಲೆ ಮಾಡಿರುವುದು ಗೊತ್ತಾಗಿದೆ. ಇದೀಗ ಆಕೆಯನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.